ಬೆಂಗಳೂರು: ನಗರಾಭಿವೃದ್ಧಿ, ಮಾಹಿತಿ ಮತ್ತು ಹಜ್ ಸಚಿವ ರೋಷನ್ ಬೇಗ್ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಭೆಯಲ್ಲಿ ಅವಾಚ್ಯ ಶಬ್ದ ಪ್ರಯೋಗ ಮಾಡಿದ್ದಾರೆ.
ಪುಲಕೇಶಿ ನಗರದಲ್ಲಿ ಕಾಂಗ್ರೆಸ್ ಸಭೆಯಲ್ಲಿ 500, 1000 ರೂ ನೋಟು ನಿಷೇಧದ ಬಗ್ಗೆ ಮಾತನಾಡುತ್ತಿದ್ದ ರೋಷನ್ ಬೇಗ್, ಪ್ರಧಾನಿ ಮೋದಿ ನೋಟು ನಿಷೇಧ ಮಾಡಿದ್ದಕ್ಕೆ ಅಧಿಕಾರಕ್ಕೆ ತಂದವರೇ ಬೈಯ್ಯುತ್ತಿದ್ದಾರೆ. ಅಧಿಕಾರಕ್ಕೆ ಬಂದಾಗ ಮೋದಿಯನ್ನು ಹೊಗಳುತ್ತಿದ್ದವರೇ ಈಗ ನೋಟು ನಿಷೇಧ ಮಾಡಿದ ಮೇಲೆ ಈ ..... ಮಗ ಏನೆಲ್ಲಾ ಮಾಡಿಬಿಟ್ಟ' ಎಂದು ಬೈಯ್ಯುತ್ತಿದ್ದಾರೆಂದು ರೋಷನ್ ಬೇಗ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಗಾಂಧಿಗಳು ದೇಶಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟರು, ದೇಶಕ್ಕಾಗಿ ರಾಜೀವ್ ಗಾಂಧಿ ಜೀವ ತ್ಯಾಗ ಮಾಡಿದ್ದರು. ಆದರೆ ಈಗ ಅವರ ಮಗ ರಾಹುಲ್ ಗಾಂಧಿಯವರನ್ನು ಮಾತ್ರ ಬೈಯ್ಯಲಾಗುತ್ತಿದೆ ಎಂದು ರೋಷನ್ ಬೇಗ್ ಬೇಸರ ವ್ಯಕ್ತಪಡಿಸಿದ್ದಾರೆ.
ರೋಷನ್ ಬೇಗ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಪ್ರಧಾನಿ ಬಗ್ಗೆ ಅವಾಚ್ಯ ಶಬ್ದ ಬಳಕೆ ಮಾಡಿದ್ದಕ್ಕೆ ಬೇಗ್ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಹೇಳಿದೆ. ಪ್ರಧಾನಿ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಕ್ಕೆ ರೋಷನ್ ಬೇಗ್ ಜನತೆಯಲ್ಲಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದರೆ, ಇಂತಹ ಸಚಿವರನ್ನು ಸಿಎಂ ಸಿದ್ದರಾಮಯ್ಯ ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಎಂಎಲ್ ಸಿ ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos