ಸಮರ್ಥ ಆಡಳಿತಕ್ಕೆ ಮಾಧ್ಯಮದ ಜತೆ ಜನರೆಡೆಗೆ' ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ
ಬೆಂಗಳೂರು: ಸಮಾಜದಲ್ಲಿ ಇಂದು ಬಹುತೇಕ ಮಂದಿ ಸಾಮಾಜಿಕ ಮಾಧ್ಯಮದ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಮಾಧ್ಯಮಗಳನ್ನು ರಚನಾತ್ಮಕವಾಗಿ ಬಳಸುವ ಮೂಲಕ ಸುಳ್ಳು ಹಾಗೂ ಅಪಪ್ರಚಾರದ ಹರಡುವಿಕೆಯನ್ನು ಸಮರ್ಥವಾಗಿ ತಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.
ಅವರು ಇಂದು ಬೆಂಗಳೂರಿನಲ್ಲಿ 'ಸಮರ್ಥ ಆಡಳಿತಕ್ಕೆ ಮಾಧ್ಯಮದ ಜತೆ ಜನರೆಡೆಗೆ' ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಅನ್ನ ಭಾಗ್ಯ ಯೋಜನೆಯನ್ನು ಸಮರ್ಪಕ ರೀತಿಯಲ್ಲಿ ಪೂರೈಕೆ ಮಾಡಿಲ್ಲ ಎಂದು ಟೀಕೆಗಳು ಕೇಳಿಬಂದವು. ಈ ವಿಷಯದಲ್ಲಿ ವಾಸ್ತವವನ್ನು ಮುಚ್ಚಿಡಲಾಯಿತು. ಈ ಯೋಜನೆಯ ಅಗತ್ಯವನ್ನು ಜನತೆಗೆ ತಲುಪಿಸುವ ಕೆಲಸಗಳು ಆಗಿಲ್ಲ. ಹೀಗಾಗಿ ಮಾಧ್ಯಮಗಳು ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಿ ಇದನ್ನು ಸರಿಪಡಿಸಬೇಕು ಎಂದು ಆಶಿಸಿದರು.
ಅನ್ನಭಾಗ್ಯ ಯೋಜನೆ ಜಾರಿ ಮಾಡಿರದಿದ್ದರೆ ಇಂದು ಕರ್ನಾಟಕದಲ್ಲಿ ಎಂತಹ ಪರಿಸ್ಥಿತಿಯುಂಟಾಗುತ್ತಿತ್ತು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಹಸಿವಿನಿಂದ ಮೃತಪಟ್ಟ ಯಾವೊಂದು ಘಟನೆಯೂ ಇತ್ತೀಚೆಗೆ ನಡೆದಿಲ್ಲ ಎಂದು ಯೋಜನೆಯನ್ನು ಸಮರ್ಥಿಸಿದರು.ಅದೇ ರೀತಿ ಕ್ಷೀರ ಭಾಗ್ಯ ಯೋಜನೆ ಕೂಡ ಅನೇಕ ಮಕ್ಕಳ ಆರೋಗ್ಯ ಸುಧಾರಿಸಿದೆ ಎಂದರು.
ದೇಶದ ಜನತೆಯಲ್ಲಿ 87 ಕೋಟಿ ಜನ ಮೊಬೈಲ್ ಬಳಕೆದಾರರಾಗಿದ್ದು ಬಹುತೇಕರು ಸಾಮಾಜಿಕ ಮಾಧ್ಯಮ ತಾಣ ಬಳಸುತ್ತಾರೆ. ಜನರನ್ನು ಪರಿಣಾಮಕಾರಿಯಾಗಿ ತಲುಪುವ ಪ್ರಭಾವಿ ಮಾಧ್ಯಮ ಇದು. ಸರ್ಕಾರದ ಯೋಜನೆಗಳನ್ನು ಮತ್ತು ವಿವಿಧ ಕಾರ್ಯಕ್ರಮಗಳನ್ನು ಮಾಧ್ಯಮಗಳು ಪರಿಣಾಮಕಾರಿಯಾಗಿ ಜನತೆಗೆ ತಲುಪಿಸಬೇಕು ಎಂದು ಹೇಳಿದರು. ವಿವಿಧ ಇಲಾಖೆಗಳು ಹೆಚ್ಚು ಸ್ಪಂದನಶೀಲವಾಗಿ ಸಾರ್ವಜನಿಕರೊಂದಿಗೆ ಸಂವಾದಿಸಲು ಸಾಮಾಜಿಕ ಮಾಧ್ಯಮ ತಾಣಗಳನ್ನು ಬಳಸಬೇಕೆಂದು ಕೂಡ ಅವರು ಒತ್ತಾಯಿಸಿದರು.
ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ಧ್ವನಿಯಿಲ್ಲದವರಿಗೆ ದನಿಯಾಗಬೇಕು. ಸಮಾಜದಲ್ಲಿ ಸಕಾರಾತ್ಮ ಬದಲಾವಣೆಗೆ ಕಾರಣವಾಗಬೇಕು. ಹಾಗಾಗಿಯೇ ಅದನ್ನು ಸಮಾಜದ ನಾಲ್ಕನೇ ಅಂಗ ಎನ್ನುತ್ತಾರೆ. ಸಮಾಜದ ಪ್ರಗತಿಗೆ ಜನತೆಗೆ ನೀಡಿದ್ದ ಭರವಸೆಗಳನ್ನು ವಿಧಾನಸಭೆ ಚುನಾವಣೆಗೆ ಮೊದಲು ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಆಶ್ವಾಸನೆ ನೀಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos