ರಾಜ್ಯ

ಬೆಂಗಳೂರು: ಮಗನ ಎದುರಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿಗಳು ಪರಾರಿಯಾಗಲು ಪೊಲೀಸರ ಸಹಾಯ

Shilpa D
ಬೆಂಗಳೂರು: ಹಾಡಹಗಲೇ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ ಇಬ್ಬರು ಆರೋಪಿಗಳು ಆಕೆಯ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಸಹಕಾರ ನಗರದ ಕೊಡಿಗೆಹಳ್ಳಿಗೇಟ್ ಬಳಿ ನಡೆದಿದೆ. ಮಹಿಳೆಯನ್ನು ರಕ್ಷಿಸಲು ಬಂದ ಇಬ್ಬರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ.
ಸ್ಥಳಕ್ಕೆ ಬಂದ ಎಎಸ್ ಐ ಆರೋಪಿಗಳು ಅಲ್ಲಿಂದ ಪರಾರಿಯಾಗಲು ಸಹಾಯ ಮಾಡಿದ್ದಾರೆ ಎಂಬ ದೂರು ಕೇಳಿ ಬಂದಿದೆ. ದುರ್ವರ್ತನೆ ತೋರಿದ ಯುವಕರಿಗೆ ತಾವೇ ಬೈಕ್‌ ಕೀ ಕೊಟ್ಟು ಸ್ಥಳದಿಂದ ಕಳುಹಿಸಿದ್ದ ಪೊಲೀಸರು, ಈಗ ಆರೋಪಿಗಳನ್ನು ಹುಡುಕಾಡುವ ನಾಟಕವಾಡುತ್ತಿದ್ದಾರೆ’ ಎಂದು ದೂರುದಾರ ಭರತ್ ಸಿಂಗ್ ಆರೋಪಿಸಿದ್ದಾರೆ.
ಖಾಸಗಿ ಶಾಲೆಯೊಂದರ ಪಕ್ಕದಲ್ಲಿ ತಳ್ಳುವ ಗಾಡಿಯಲ್ಲಿ ಮಹಿಳೆ ಆಹಾರ  ಪದಾರ್ಥ ಮಾರಾಟ ಮಾಡುತ್ತಾರೆ. ಸುಮಾರು 4.30ರ ವೇಳೆಗೆ ಸ್ಥಳಕ್ಕೆ ಬಂದ ಇಬ್ಬರು ವ್ಯಕ್ತಿಗಳು, ಸಿಗರೇಟ್ ನೀಡುವಂತೆ ಆಕೆಯ ಮಗನಿಗೆ ಕೇಳಿದ್ದಾರೆ,ಆದರೆ ಸಿಗರೇಟ್ ಇಲ್ಲ ಎಂದು ಹೇಳಿದ ನಂತರ ಅಲ್ಲಿಂದ ತೆರಳಿದ ಇಬ್ಬರು ಮತ್ತೆ ಬೈಕ್ ನಲ್ಲಿ ವಾಪಾಸಾಗಿದ್ದಾರೆ. ಆಕೆಯ ಅಂಗಡಿಯಿಂದ ಕೆಲವೊಂದು ಆಹಾರ ಖರೀದಿಸಿ ಆಕೆಯ ಅಪ್ರಾಪ್ತ ಮಗನ ಮುಂದೆಯೇ ಆಕೆಯ ಸೊಂಟವನ್ನು ಜಿಗುಟಿ ದುರ್ವರ್ತನೆ ತೋರಿದ್ದಾರೆ. 
ಇನ್ನೂ ಘಟನೆ ನೋಡಿದ ಸ್ಥಳೀಯ  ಟಿ.ವಿ ಚಾನೆಲ್ ಪತ್ರಕರ್ತ ಭರತ್ ಸಿಂಗ್ ಎಂಬುವರು ತಮ್ಮ ಸ್ನೇಹಿತರ ಜೊತೆ ಬಂದು ಇಬ್ಬರು ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದಾರೆ,. ಈ ವೇಳೆ ಕಲ್ಲುಗಳನ್ನು ತೆಗೆದುಕೊಂಡ ಆರೋಪಿಗಳು ಭರತ್ ಮತ್ತು ಅವರ ಸ್ನೇಹಿತನ ಮೇಲೆ ತೂರಾಟ ನಡೆಸಿದ್ದಾರೆ.
ಈ ವೇಳೆ ಮಹಿಳೆ ಮತ್ತು ಆಕೆಯ ಪುತ್ರನಿಗೂ ಗಾಯಗಳಾಗಿವೆ, ಈ ವೇಳೆ ಸ್ಥಳಕ್ಕೆ ಬಂದ ಕೊಡಿಗೆಹಳ್ಳಿ ಪೊಲೀಸರು,ಐಪಿಸಿ ಸೆಕ್ಷನ್ 354ರ ಅಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ನನ್ನ ಮತ್ತು ನನ್ನ ಸ್ನೇಹಿತನ ಮೇಲೂ ದಾಳಿ ನಡೆಸಿದ್ದಾರೆ, ಆದರೆ ಪೊಲೀಸರು ನಮ್ಮ ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಭರತ್ ಸಿಂಗ್ ಆರೋಪಿಸಿದ್ದಾರೆ.
SCROLL FOR NEXT