ರುಪೇ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಮೋದಿ ಭಾಷಣ
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಜನಸೇವೆಯೇ ಜನಾರ್ಧನ ಸೇವೆಯೆಂಬ ಮಂತ್ರವನ್ನು ಜೀವನದ ಏಕಮೇವ ಗುರಿಯಾಗಿರಿಸಿಕೊಂಡಿದ್ದಾರೆ. ಅವರಿಂದ ಇನ್ನೂ 50 ವರ್ಷಗಳ ಸೇವೆ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ರುದ್ರಾಭಿಷೇಕ ನೆರವೇರಿಸಿದ ಬಳಿಕ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆದ ರುಪೇ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಧರ್ಮಸ್ಥಳದ ಪಾವಿತ್ರ್ಯತೆ ಹಾಗೂ ಡಾ.ವಿರೇಂದ್ರ ಹೆಗ್ಗಡೆ ಅವರ ಜನಸೇವೆಯನ್ನು ಕೊಂಡಾಡಿದ್ದು, ಗೀತೆಯಲ್ಲಿ ಹೇಳಿದಂತೆ ಹೆಗಡೆಯವರು ನಿಷ್ಕಾಮ ಕರ್ಮ ಯೋಗಿಯಾಗಿದ್ದಾರೆ. ದೇಶದ ಕೋಟಿ ಕೋಟಿ ಜನತೆಗೆ ವಿರೇಂದ್ರ ಹೆಗ್ಗಡೆ ಯವರು ಪ್ರೇರಣಾದಾಯಿ ವ್ಯಕ್ತಿಯಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ವೇದಿಕೆಯಲ್ಲಿ ವಿರೇಂದ್ರ ಹೆಗ್ಗಡೆ ಯವರನ್ನು ಸನ್ಮಾನಿಸಿ, ಅವರಿಂದ ಸನ್ಮಾನ ಸ್ವೀಕರಿಸಲು ನಾನು ವ್ಯಕ್ತಿಗತವಾಗಿ ಸಣ್ಣವನು, ಆದರೆ ದೇಶದ ಜನತೆ ನನ್ನನ್ನು ಪ್ರಧಾನಿಯ ಹುದ್ದೆಯಲ್ಲಿ ಕೂರಿಸಿದ್ದಾರೆ. ದೇಶದ ಜನತೆಯ ಪ್ರತಿನಿಧಿಯಾಗಿ ಸನ್ಮಾನ ಮಾಡಿ, ಸ್ವೀಕರಿಸಲು ಹೆಮ್ಮೆಪಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ, ಕೌಶಲ್ಯಾಭಿವೃದ್ಧಿಯಾಗದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ, ಅನೇಕ ರಾಜ್ಯಗಳು ಕೌಶಲ್ಯಾಭಿವೃದ್ಧಿ ಪ್ರಾರಂಭಿಸಿದ್ದು, ವಿರೇಂದ್ರ ಹೆಗ್ಗಡೆ ಯವರು ಕೌಶಲ್ಯಾಭಿವೃದ್ಧಿಗೆ ಮಾದರಿಯಾಗಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯುಗಾನುಕೂಲ, ಪರಿವರ್ತನೆ, ಸಮಾಜದ ಅವಶಕತೆಗೆ ತಕ್ಕಂತೆ ಸೇವೆ ಸಲ್ಲಿಸಿರುವ ನಮ್ಮ ಋಷಿ ಮುನಿ ಪರಂಪರೆಯ ಅನೇಕ ಸಂಸ್ಥೆಗಳಿವೆ. ಅಂತಹ ಸಂಸ್ಥೆಗಳು ಕೋಟಿ ಕೋಟಿ ಜನರಿಗೆ ಪ್ರೇರಣೆ, ವಿಶ್ವದ ವಿದ್ಯಾನಿಲಯಗಳು ಇಂತಹ ಸಂಸ್ಥೆಗಳನ್ನು ಅಧ್ಯಯನ ಮಾಡಬೇಕು. ಆಧ್ಯಾತ್ಮಿಕ ಪರಂಪರೆ ಇವುಗಳನ್ನು ಹೇಗೆ ನಿಭಾಯಿಸುತ್ತವೆ ಎಂಬುದನ್ನು ಅಧ್ಯಯನ ಮಾಡಬೇಕು ಎಂದು ಮೋದಿ ಅಭಿಪ್ರಾಯಪಟ್ಟಿದ್ದು, ಅನೇಕ ಪಂಡಿತರು ಗ್ರಾಮೀಣ ಭಾಗದವರು ಟೆಕ್ನಾಲಜಿ ಅರಿಯುವುದಿಲ್ಲ ಎನ್ನುತ್ತಿದ್ದರು. ಆದರೆ ಕೌಶಲ್ಯಾಭಿವೃದ್ಧಿ ಮಾಡುವ ಮೂಲಕ ಹೆಗ್ಗಡೆಯವರು ಇದಕ್ಕೆ ಉತ್ತರ ನೀಡಿದ್ದಾರೆ. ಭಾರತದಲ್ಲಿ ನಗದು ರಹಿತ ವಹಿವಾಟು ನಡೆಯುವುದಕ್ಕೆ ಉಪಯೋಗವಾಗುವಂತಹ ದೊಡ್ಡ ಅಭಿಯಾನ ಪ್ರಾರಂಭಿಸಿದ್ದಾರೆ ಎಂದಿದ್ದಾರೆ.
ಚಿನ್ನದ ನಾಣ್ಯ, ತಾಮ್ರದ ನಾಣ್ಯ, ನೋಟು, ಹೀಗೆ ಯುಗ ಯುಗಗಳಿಂದ ನಗದಿನ ರೂಪ ಬದಲಾಗಿದೆ, ಈಗ ಡಿಜಿಟಲ್ ಹಣದ ಕಾಲವಾಗಿದ್ದು, ನಗದು ರಹಿತ ವಹಿವಾಟಿನಿಂದ ಪಾರದರ್ಶಕತೆ ಕಾಪಾಡಲು ಸಾಧ್ಯವಾಗಿದ್ದು ದೇಶದ ಜನತೆ ಹೆಚ್ಚು ಡಿಜಿಟಲ್ ವಹಿವಾಟು ನಡೆಸಬೇಕೆಂದು ಮೋದಿ ಕರೆ ನೀಡಿದ್ದಾರೆ.
ಇದೇ ಕಾರ್ಯಕ್ರಮದ್ಲಲಿ ಧರ್ಮಸ್ಥಳ ಸಂಸ್ಥೆ ಕೈಗೊಂಡಿರುವ ಪರಿಸರ ಸಂರಕ್ಷಣೆ ಅಭಿಯಾನದ ಲೋಗೋ ಉದ್ಘಾಟನೆಗೊಂಡಿದ್ದು, ಕೃಷಿ, ಪರಿಸರದ ಬಗ್ಗೆಯೂ ಮಾತನಾಡಿರುವ ಪ್ರಧಾನಿ ಮೋದಿ, ನಮ್ಮ ಹಿರಿಯರು ನಮಗೆ ನೀಡಿರುವ ಪರಿಸರವನ್ನು ನಾವು ಮುಂದಿನ ಪೀಳಿಗೆಗೆ ನಾಶವಾಗದಂತೆ ನೀಡಬೇಕಿದೆ, ಇದಕ್ಕಾಗಿ ಪರಿಸರ ಸಂರಕ್ಷಣೆಯಾಗಬೇಕಿದೆ. 2022ರ ವೇಳೆಗೆ ಕೃಷಿಯಲ್ಲಿ ಯೂರಿಯಾ ಬಳಕೆಯನ್ನು ಶೇ.50 ರಷ್ಟು ಕಡಿಮೆ ಮಾಡಿದರೆ ಫಸಲು ಹೆಚ್ಚುತ್ತದೆ. ಭೂಮಿಯ ಸತ್ವವೂ ಉಳಿಯುತ್ತದೆ, ಆದ್ದರಿಂದ ರೈತರು ಯೂರಿಯಾ ಬಳಕೆ ಕಡಿಮೆ ಮಾಡಲು ಸಂಕಲ್ಪ ಮಾಡಬೇಕು ಎಂದು ಮೋದಿ ಕರೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos