ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಎಡ ಪಂಥೀಯರ ಕೈವಾಡವಿದೆ ಎಂಬ ಊಹಾ ಪೋಹದ ಮಾತುಗಳು ಕೇಳಿ ಬರುತ್ತಿದೆ. ಆದರೆ ಗೌರಿ ಹತ್ಯೆಯಲ್ಲಿ ನಕ್ಸಲರ ಪಾತ್ರವಿದೆ ಎಂಬ ಆರೋಪ ಆಧಾರರಹಿತವಾದದ್ದು ಎಂದು ಸುಧಾರಿತ ನಕ್ಸಲ್ ನಾಯಕ ಸಿರಿಮನೆ ನಾಗರಾಜ್ ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು 19 ಮಂದಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ನಕ್ಸಲರ ಪಾತ್ರವಿದೆಯೇ ಎಂಬ ಬಗ್ಗೆಯು ತನಿಖೆ ನಡೆಯುತ್ತಿದೆ.
ಗೌರಿ ಹಲವು ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತಂದಿದ್ದರು.ನಕ್ಸಲರು ಯಾವತ್ತೂ ಗೌರಿ ಲಂಕೇಶ್ ಅವರನ್ನು ತಮ್ಮ ಶತ್ರು ಎಂದು ಭಾವಿಸಿರಲಿಲ್ಲ, ಅವರನ್ನು ಶತ್ರು ಎಂದು ಪರಿಗಣಿಸಿದವರು ಮಾತ್ರ ಗೌರಿ ಅವರನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಸಿರಿಮನೆ ನಾಗರಾಜ್ ಮತ್ತು ಬಂದೂಕು ಕೆಳಗಿಳಿಸಿ ಹೊಸ ಜೀವನ ಆರಂಭಿಸಿರುವ ನೂರ್ ಶ್ರೀಧರ್ ತಾವು ಮುಖ್ಯವಾಹಿನಿಗೆ ಬರಲು ಸರ್ಕಾರದ ಜೊತೆ ಗೌರಿ ಲಂಕೇಶ್ ಅವರು ಮಾತನಾಡಿ ಶರಣಾಗುವಂತೆ ಮಾಡಿದ್ದನ್ನು ಸ್ಮರಿಸಿದ್ದಾರೆ.
ನಾವು ಕ್ರಾಂತಿಕಾರಿ ಚಳುವಳಿ ಆರಂಭಿಸಿದೆವು, ಆದರೆ ಅದರಿಂದ ನಮ್ಮ ನಿಜವಾದ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ ಎಂದು ನಿಧಾನವಾಗಿ ಅರಿವಾಯಿತು. 2006 ರಲ್ಲಿ ನಾವು ಕ್ರಾಂತಿ ಬಿಟ್ಟು, ಹಲವು ಮಂದಿಯ ಜೊತೆ ವಾಪಾಸಾದೆವು. ನಂದ ಕುಮಾರ್ ಸೇರಿದಂತೆ ಹಲವರನ್ನು ಬಂಧಿಸಲಾಯಿತು. ನಂತರ ನಮ್ಮ ತಂಡದ ಬಲ ಕುಗ್ಗಿತು.
ಇದೇ ವೇಳೆ ಶಾಂತಿಗಾಗಿ ನಾಗರಿಕರ ವೇದಿಕೆ ನಕ್ಸಲರನ್ನು ಮುಖ್ಯ ವಾಹಿನಿಗೆ ವಾಪಸ್ ಕರೆ ತರಲು ಪ್ರಯತ್ನಿಸುತ್ತಿತ್ತು. ಈ ವೇದಿಕೆಯಲ್ಲಿ ಚಿತ್ರದುರ್ಗ ಮಠದ ಮುರುಗ ಶರಣಾ, ಗಾಂಧಿವಾದಿ ಎಚ್ .ಎಸ್ ದೊರೆಸ್ವಾಮಿ, ಡಾ. ಯು. ಆರ್ ಅನಂತ ಮೂರ್ತಿ, ಎ.ಕೆ ಸುಬ್ಬಯ್ಯ, ಮತ್ತು ಗೌರಿ ಲಂಕೇಶ್ ಸದಸ್ಯರಾಗಿದ್ದರು.
2000 ದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಸಾಕೇತ್ ರಾಜನ್ ನಂತೆ ನಮ್ಮ ಜೀವನ ಅಂತ್ಯಗೊಳ್ಳಬಾರದು ಎಂಬುದು ಇವರೆಲ್ಲರ ಪ್ರಮುಖ ಉದ್ದೇಶವಾಗಿತ್ತು.
ನಾವು ಕೂಡ ಶಾಂತಿಯುತ ಜೀವನ ನಡೆಸಲು ಸರ್ಕಾರದಿಂದ ಅನುಕೂಲ ಕಲ್ಪಿಸುವಲ್ಲಿ ಗೌರಿ ಲಂಕೇಶ್ ಪ್ರಮುಖ ಪಾತ್ರ ವಹಿಸಿದ್ದರು. 2014ರ ಡಿಸೆಂಬರ್ ನಲ್ಲಿ ನಾವು ಶರಣಾದೆವು. ನಾವು ಅವರನ್ನು ತೊರೆದು ಬಂದೆವು ಎಂದು ನಮ್ಮ ಜನ ನಮ್ಮನ್ನು ಟೀಕಿಸಿದರು. ಆದರೆ ಅವರೆಂದಿಗೂ ನಮಗೆ ತೊಂದರೆ ನೀಡಲಿಲ್ಲ, ಅವರು ಗೌರಿ ಲಂಕೇಶ್ ಅವರನ್ನು ತಮ್ಮ ಶತೃ ಎಂದು ಯಾವತ್ತೂ ಅಂದುಕೊಳ್ಳಲಿಲ್ಲ ಎಂದು ನಾಗರಾಜ್ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos