ಬೆಂಗಳೂರು: ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಪರಿಗಣಿಸುವಂತೆ ಒತ್ತಾಯಿಸಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕೇಂದ್ರ ಸಚಿವ ಅರುಣ್ ಜೈಟ್ಲಿ ಅವರಿಗೆ ಪತ್ರ ಬರೆದಿದ್ದಾರೆ.
ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ (ಐಬಿಪಿಎಸ್) ಹೊಸ ನಿಯಮಗಳಿಂದಾಗಿ ಗ್ರಾಮೀಣ ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ವಂಚಿತರಾಗಿರುವ ರಾಜ್ಯದ ಅಭ್ಯರ್ಥಿಗಳ ಬೆಂಬಲಕ್ಕೆ ಎಚ್.ಡಿ. ಕುಮಾರ ಸ್ವಾಮಿ ನಿಂತಿದ್ದಾರೆ.
ಇತ್ತೀಚೆಗೆ ನಡೆದ ಗ್ರಾಮೀಣ ಬ್ಯಾಂಕ್ ನೇಮಕಾತಿಗಳ ಪರೀಕ್ಷೆಯಲ್ಲಿ ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಮಾತ್ರವೇ ಪರೀಕ್ಷೆ ಬರೆಯಲು ಅವಕಾಶ ಮಾಡಿರುವ ಐಬಿಪಿಎಸ್ ನ ಹೊಸ ನಿಯಮ ಹೇಗೆ ಸಾಮಾಜಿಕವಾಗಿ ಹಿಂದುಳಿದ ಪ್ರದೇಶಗಳ ಸೂಕ್ತ ಅಭ್ಯರ್ಥಿಗಳಿಗೆ ಉದ್ಯೋಗಗಳಿಂದ ವಂಚಿತರನ್ನಾಗಿ ಮಾಡುತ್ತದೆ ಎಂಬುದನ್ನು ಎಳೆಎಳೆಯಾಗಿ ವಿವರಿಸಿದ್ದಾರೆ
ಸ್ಥಳೀಯ ಭಾಷೆಯ ಅನಾದರಣೆ ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತ್ರ ಗ್ರಾಮೀಣ ಬ್ಯಾಂಕ್ ಗಳ ಪರೀಕ್ಷೆಗಳನ್ನು ಬರೆಯಲು ಅನುವು ಮಾಡಿಕೊಡುವುದರಿಂದ ಯಾವುದೇ ರಾಜ್ಯಗಳ ಗ್ರಾಮೀಣ ಭಾಗಗಳಲ್ಲಿರುವ ಅರ್ಹ ಅಭ್ಯರ್ಥಿಗಳು ಈ ಬ್ಯಾಂಕ್ ಗಳಲ್ಲಿ ಉದ್ಯೋಗ ಪಡೆಯುವ ಅವಕಾಶದಿಂದ ವಂಚಿತವಾಗಲಿದ್ದಾರೆ. ಅಲ್ಲದೆ, ಸ್ಥಳೀಯ ಭಾಷೆಯಲ್ಲಿ ಮಾತ್ರವೇ ಅವರು ಸಿದ್ದಹಸ್ತರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಹಿಂದಿ ಅಥವಾ ಇಂಗ್ಲೀಷ್ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಬಲವಂತಪಡಿಸಿದಂತಾಗುತ್ತದೆ.
ಅರ್ಹತೆಯಿದ್ದೂ ಉದ್ಯೋಗ ಪಡೆಯುವಲ್ಲಿ ಗ್ರಾಮೀಣ ಅಭ್ಯರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಕನ್ನಡಿಗರನ್ನು ಹಿಂದಿಕ್ಕಿ ಹಿಂದಿ ಭಾಷಿಗರೇ ಉದ್ಯೋಗಗಳನ್ನು ಹೆಚ್ಚಾಗಿ ಪಡೆದುಕೊಂಡರೆ ಇದು ಸಂವಿಧಾನದ ಮೂಲ ಉದ್ದೇಶಗಳಿಗೆ ಹೊಡೆತ ಕೊಟ್ಟಂತೆ ಎಂದು ಹೇಳಿದ್ದಾರೆ.