ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಎಸಿಬಿ ದಾಖಲಿಸಿರುವ ಎಫ್ ಐಆರ್ ರದ್ದುಪಡಿಸಲು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತಾತ್ಕಾಲಿಕ ತಡೆ ಆದೇಶ ನೀಡಿದೆ.
ಇದಕ್ಕೆ ಮುನ್ನ ಪ್ರಕರಣದ ವಿಚಾರಣೆಯ ಸಂಬಂಧ ಏಳು ಗಂಟೆಯ ಸುದೀರ್ಘ ಡಿಕ್ಟೇಷನ್ ನಡೆದಿತ್ತು. ಅಂತಿಮವಾಗಿ ಎಸಿಬಿಯ ಎಲ್ಲ ವಾದಗಳನ್ನು ಹೈಕೋರ್ಟ್ ತಿರಸ್ಕರಿಸಿ ಮಧ್ಯಾಂತರ ತಡೆ ಆದೇಶ ಪ್ರಕಟಿಸಿದೆ.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾ.ಅರವಿಂದ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ನಿನ್ನೆ ಇಡೀ ದಿನ ಪ್ರಕರಣದ ಮಧ್ಯಾಂತರ ಆದೇಶದ ಕುರಿತು ಡಿಕ್ಟೇಷನ್ ನೀಡಿತ್ತು. ಆದೇಶದಲ್ಲಿ ಅರ್ಜಿದಾರರ ವಾದ ಮತ್ತು ಎಸಿಬಿಯ ಪ್ರತಿವಾದ ಹಾಗೂ ಸುಪ್ರೀಂಕೋರ್ಟ್ ತೀರ್ಪುಗಳನ್ನು ನ್ಯಾಯಮೂರ್ತಿ ಉಲ್ಲೇಖಿಸಿದ್ದಾರೆ.
ಎಸಿಬಿ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್, "ಭ್ರಷ್ಟಾಚಾರ ನಿಗ್ರಹ ಕಾಯಿದೆ 1988 ಸೆಕ್ಷನ್ 19ರಡಿ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಲು ನಿರ್ಬಂಧವಿದೆ," ಎಂದು ವಾದಿಸಿದ್ದರು. ಅದಕ್ಕೆ ನ್ಯಾಯಾಲಯ, "ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಬಹುದು ಮತ್ತು ಅಂತಹ ಅರ್ಜಿ ವಿಚಾರಣೆ ನಡೆಸುವ ಅಧಿಕಾರ ಸಂವಿಧಾನದ 226ನೇ ವಿಧಿಯಡಿ ಹೈಕೋರ್ಟ್ಗೆ ಇದೆ,"ಎಂದು ಹೇಳಿದೆ.
ಇದೀಗ ಹೈ ಕೋರ್ಟ್ ತಡೆಯಿಂದ ಬಿಎಸ್ ವೈ ಗೆ ಕೊಂಚ ನಿರಾಳವಾಗಿದೆ.