ಬೆಳಗಾವಿ/ ಯಾದಗಿರಿ: ಯಾದಗಿರಿ ಜಿಲ್ಲೆಯ ಕೃಷ್ಣಾನದಿ ದ್ವೀಪದಲ್ಲಿ ಕಳೆದ 4 ದಿನಗಳಿಂದ ಸಿಲುಕಿದ್ದ ಮೂವರು ಕುರಿಗಾಹಿಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಿಸಿದೆ.
ಸೋಮನಗೌಡ, ಶೇಖರಪ್ಪ, ಗಡ್ಡೆಪ್ಪ ಅವರನ್ನು ರಕ್ಷಿಸಲಾಗಿದೆ. ಸೋಮವಾರದಿಂದ ಈ ಮೂವರು ಸುರಪುರ ದ್ವೀಪದಲ್ಲಿ ತಮ್ಮ 80 ಕುರಿಗಳ ಜೊತೆ ಸಿಲುಕಿಕೊಂಡಿದ್ದರು.
ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಮೇಲಿನಗಡ್ಡಿ ಗ್ರಾಮದ ಮೂರು ಕುರಿಗಾಹಿಗಳು ಮತ್ತು ಅವರ 80 ಕುರಿಗಳು ದ್ವೀಪದಲ್ಲೇ ಸಿಲುಕಿಕೊಂಡಿದ್ದರು. ಮಾರನೇ ದಿನ ನೀರಿನ ಪ್ರಮಾಣ ಕಡಿಮೆಯಾಗಬಹುದೆಂದು ನಿರೀಕ್ಷಿಸಿದ್ದರು, ಆದರೆ ಮತ್ತೆ ಹೊರ ಹರಿವು ಹೆಚ್ಚಾದ ಪರಿಣಾಮ ಅವರು ವಾಪಸ್ ಬರಲು ಸಾಧ್ಯವಾಗಲಿಲ್ಲ,
ಮೂವರು ಕುರಿಗಾಹಿಗಳು ಕುರಿಯ ಹಾಲು ಕುಡಿದು ಬದುಕಿದ್ದರು, ಕಲ್ಲುಗಳ ನಡುವೆ ತಮ್ಮ ಟವೆಲ್ ಹಾಸಿಕೊಂಡು ಅಲ್ಲಿಯೇ ಮಲಗಿದ್ದರು. ನಂತರ ನೀರಿನ ಪ್ರವಾಹ ಕಡಿಮೆಯಾಗದ ಹಿನ್ನೆಲೆಯಲ್ಲಿ ಈ ಮೂವರು ಮೊಬೈಲ್ ಮೂಲಕ ತಮ್ಮ ಕುಟುಂಬಸ್ಥರಿಗೆ ವಿಷಯ ತಿಳಿಸಿದರು. ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ವಿಷಯ ಮುಟ್ಟಿಸಿದ್ದಾರೆ. ಗುರುವಾರ ಹೈದರಾಬಾದ್ ನ ಎನ್ ಡಿ ಆರ್ ಎಫ್ ತಂಡ ಕಾರ್ಯಾಚರಣೆ ಆರಂಭಿಸಿ ಮೂವರನ್ನು ರಕ್ಷಿಸಿದ್ದಾರೆ.