ಬೆಂಗಳೂರು: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತೆಯೊಬ್ಬಳ ಹೊಟ್ಟೆಲ್ಲಿರುವ 22 ವಾರಗಳ ಭ್ರೂಣ ತೆಗೆಯಲು ಕರ್ನಾಟಕ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ.
ಮೂಲತಃ ದಾವಣಗೆರೆ ಪಟ್ಟಣದ ಅಪ್ರಾಪ್ತೆಯ ಹೊಟ್ಟೆಯಲ್ಲಿರುವ 22 ವಾರಗಳ ಭ್ರೂಣವನ್ನು ಗರ್ಭಪಾತ ಮಾಡಲು ಕರ್ನಾಟಕ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ. ಆಪ್ರಾಪ್ತೆಯ ಪೋಷಕರು ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ ನ್ಯಾಯಮೂರ್ತಿ ರಾಘವೇಂದ್ರ ಚೌವ್ಹಾಣ್ ಅವರ ಏಕ ಸದಸ್ಯ ಪೀಠ, ಆಪ್ರಾಪ್ತೆಯ ಗರ್ಭಪಾತಕ್ಕೆ ಅನುಮತಿ ನೀಡಿದೆ. ಇದಕ್ಕೂ ಮೊದಲು ಪ್ರಕರಣ ಸಂಬಂಧ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಸಲ್ಲಿಕೆ ಮಾಡಿದ್ದ ವರದಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ.
'ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಆ ಅಪ್ರಾಪ್ತೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಆಕೆಯ ಗರ್ಭದಲ್ಲಿರುವ ಭ್ರೂಣವನ್ನು ತೆಗೆದು ಹಾಕಬೇಕು. ಆಕೆ ಸಂಪೂರ್ಣವಾಗಿ ಚೇತರಿಕೆ ಕಂಡ ಬಳಿಕ ಊರಿಗೆ ಕಳುಹಿಸಬೇಕು,' ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ 'ಆಕೆಯ ಹೊಟ್ಟೆಯಿಂದ ತೆಗೆಯುವ ಭ್ರೂಣವನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಬೇಕಿದ್ದು, ಹೀಗಾಗಿ ಆಸ್ಪತ್ರೆ ಸುರಕ್ಷಿತವಾಗಿ ಭ್ರೂಣವನ್ನು ಸಂರಕ್ಷಿಸಬೇಕು. ನಂತರ ದಾವಣಗೆರೆ ಮಹಿಳಾ ಪೊಲೀಸಧಿರು ಆ ಭ್ರೂಣ ಪಡೆದು ಹೈದರಾಬಾದ್ನಲ್ಲಿರುವ ಕೇಂದ್ರ ಪ್ರಯೋಗಾಲಯಕ್ಕೆ ಡಿಎನ್ಎ ಪರೀಕ್ಷೆಗೆ ಕಳುಹಿಸಬೇಕು. ಅದು ಎರಡು ತಿಂಗಳಲ್ಲಿ ತನಿಖಾಧಿಕಾರಿಗೆ ವರದಿಯನ್ನು ಕೊಡಬೇಕು. ಈ ಕೆಲಸಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ ಎಂದೂ ನ್ಯಾಯಾಧೀಶರು ಆದೇಶಿಸಿದ್ದಾರೆ.
ಅತ್ಯಾಚಾರದಂತಹ ಪ್ರಕರಣಗಳಲ್ಲಿ ಸಂತ್ರಸ್ತೆ ಗರ್ಭಿಣಿಯಾಗಿ 26 ವಾರ ಕಳೆದಿದ್ದರೂ ಅಂತಹ ಪ್ರಕರಣಗಳಲ್ಲಿ ಭ್ರೂಣ ತೆಗೆಯಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಆದರೆ ಈ ಪ್ರಕರಣದಲ್ಲಿ ಆಕೆ ಗರ್ಭಧರಿಸಿ 22 ವಾರಗಳಾಗಿವೆ. ಜೊತೆಗೆ ಬೆಂಗಳೂರು ವೈದ್ಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಸಲ್ಲಿಸಿರುವ ವರದಿ ಕೂಡ ಭ್ರೂಣವನ್ನು ತೆಗೆಯಲು ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದೆ. ಹಾಗಾಗಿ ಈ ಆದೇಶ ನೀಡುತ್ತಿರುವುದಾಗಿ ನ್ಯಾಯಾಧೀಶರಾದ ರಾಘವೇಂದ್ರ ಚೌವ್ಹಾಣ್ ಅವರು ಹೇಳಿದ್ದಾರೆ.
ದಾವಣಗೆರೆ ಮೂಲದ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅದೇ ಊರಿನ ಮಂದು ಎಂಬ ಪರಿಚಿತ ಯುವಕ ಆಕೆಯನ್ನು ನಂಬಿಸಿ ಹೊರಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಬಾಲಕಿ ಅಪ್ರಾಪ್ತೆ ಗರ್ಭಿಣಿಯಾಗಿದ್ದು, ಅಪ್ರಾಪ್ತೆಯಾಗಿರುವುದರಿಂದ ಮತ್ತು ಮದುವೆಯಾಗದೇ ಗರ್ಭಿಣಿಯಾಗಿರುವುದರಿಂದ ಸಮಾಜದಲ್ಲಿ ಹಾಗೂ ವೈಯಕ್ತಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಭ್ರೂಣವನ್ನು ತೆಗೆಸಲು ಅನುಮತಿ ನೀಡಬೇಕು ಆಪ್ರಾಪ್ತೆ ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಆ ಅಪ್ರಾಪ್ತೆ ಹಾಗೂ ಪೋಷಕರನ್ನು ತಮ್ಮ ಕೊಠಡಿಗೆ ಕರೆಸಿ, ವಿಚಾರಣೆ ನಡೆಸಿ, ಬಿಎಂಸಿಯಿಂದ ವೈದ್ಯ ವರದಿಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿದ ಬಳಿಕ ಈ ಆದೇಶ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos