ರಾಜ್ಯ

ಪುತ್ತೂರಿನಲ್ಲಿ ಹುಟ್ಟುಹಬ್ಬದ ಪಾರ್ಟಿಗೆ ಅಡ್ಡಿಪಡಿಸಿದ ಭಜರಂಗ ದಳ ಕಾರ್ಯಕರ್ತನ ಬಂಧನ

Sumana Upadhyaya

ಮಂಗಳೂರು: ಕೆಲವು ವಿದ್ಯಾರ್ಥಿಗಳು ಆಯೋಜಿಸಿದ್ದ ಹುಟ್ಟುಹಬ್ಬ ಸಮಾರಂಭದಲ್ಲಿ ಗಲಾಟೆ ಎಬ್ಬಿಸಿದ ಭಜರಂಗದಳ ನಾಯಕ ಶ್ರೀಧರ್ ತೆಂಕಿಲ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ಪಟ್ಟಣದ ಬೊಳುವಾರು ಸಮೀಪ ರೆಸ್ಟೋರೆಂಟ್ ಒಂದರಲ್ಲಿ ವಿವೇಕಾನಂದ ಕಾನೂನು ಪದವಿ ಕಾಲೇಜಿನ ವಿವಿಧ ಧರ್ಮಗಳ ವಿದ್ಯಾರ್ಥಿಗಳು ಹುಟ್ಟುಹಬ್ಬ ಸಮಾರಂಭಕ್ಕೆಂದು ಒಟ್ಟು ಸೇರಿದ್ದರು. ಹುಟ್ಟುಹಬ್ಬವೆಂದು ವಿದ್ಯಾರ್ಥಿಗಳ ಗುಂಪು ಕೇಕ್ ಕತ್ತರಿಸಿತ್ತು. ಈ ಸಂದರ್ಭದಲ್ಲಿ ಭಜರಂಗದಳದ ಸುಮಾರು 10 ಮಂದಿ ಕಾರ್ಯಕರ್ತರು ಹೊಟೇಲ್ ಗೆ ಹೋಗಿ ಪಾರ್ಟಿ ಮಾಡಬಾರದೆಂದು ಹೇಳಿದರು. ಪಾರ್ಟಿಯಲ್ಲಿ ಹುಡುಗಿಯರ ಜೊತೆಗೆ ಅಲ್ಪಸಂಖ್ಯಾತ ಸಮುದಾಯದ ಹುಡುಗನೊಬ್ಬ ಇದ್ದಾನೆ ಎಂದು ಮಾಹಿತಿ ಪಡೆದು ಭಜರಂಗದಳ ಕಾರ್ಯಕರ್ತರು ಹೋಗಿದ್ದರು.

ವಿದ್ಯಾರ್ಥಿಗಳ ಜೊತೆ ಮಾತನಾಡಿದಾಗ ಅಲ್ಲಿ ಎಲ್ಲ ಧರ್ಮದವರಿದ್ದಾರೆ ಎಂದು ಗೊತ್ತಾಗಿ ಅವರಿಗೆ ಬೈದು ಸ್ಥಳದಿಂದ ಹೊರಟು ಹೋದರು. ಅನವಶ್ಯಕವಾಗಿ ಸ್ಥಳಕ್ಕೆ ಹೋಗಿ ದಾಂಧಲೆ ಎಬ್ಬಿಸಿದ್ದಕ್ಕೆ ಭಜರಂಗದಳ ಜಿಲ್ಲಾ ಸಹ ಸಂಚಾಲಕ ಶ್ರೀಧರ್ ತೆಂಕಿಲ ವಿರುದ್ಧ ಸೆಕ್ಷನ್ 107ರಡಿಯಲ್ಲಿ ಸ್ವಯಂಪ್ರೇರಿತ ಕೇಸು ದಾಖಲಿಸಲಾಗಿದೆ.

ಬಂಧನದಿಂದ ತಪ್ಪಿಸಿಕೊಳ್ಳಲು ಬೇರೆಯವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಇನ್ಸ್ ಪೆಕ್ಟರ್ ಶರಣ್ ಗೌಡ ತಿಳಿಸಿದ್ದಾರೆ. ತಂಡದಲ್ಲಿದ್ದ ಸ್ವರೂಪ್ ಭಟ್ ಎಂಬುವವರನ್ನು ಗುರುತಿಸಲಾಗಿದೆ. ಉಳಿದವರೆಲ್ಲರನ್ನೂ ಗುರುತಿಸಿ ಸದ್ಯದಲ್ಲಿಯೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT