ರಾಜ್ಯ

ಅರಸೀಕೆರೆ ಕ್ಷೇತ್ರ: ತೆಂಗು ಬೆಳೆಗಾರರ ಅಸಮಾಧಾನ, ಫ್ಲೋರೋಸಿಸ್ ಸಮಸ್ಯೆಗಳೇ ಪ್ರಮುಖ ವಿಷಯ

Nagaraja AB

ಅರಸೀಕರೆ:  ಕಳೆದ  ಮೂರು ವರ್ಷಗಳ ನಿರಂತರ ಬರಗಾಲ ಹಾಗೂ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಅರಸೀಕೆರೆಯ ತೆಂಗು ಬೆಳೆಗಾರರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಮಸ್ಯೆಗಳ ಪಟ್ಟಿಯನ್ನೇ ಹೇಳುವ ತೆಂಗು ಬೆಳೆಗಾರರು, ಈ ಒತ್ತಡದಿಂದ ರಕ್ಷಿಸಲು ಕೇಂದ್ರ ಹಾಗೂ ರಾಜ್ಯಸರ್ಕಾರ ಯಾವುದೇ ರೀತಿಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ ಎನ್ನುತ್ತಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ದೊರೆತಿರುವ ಅಂಕಿ  ಅಂಶಗಳ ಪ್ರಕಾರ ಸತತ ಬರಗಾಲದಿಂದ  ಸುಮಾರು 9 ಲಕ್ಷ ತೆಂಗು ಮರಗಳು ಸಂಪೂರ್ಣವಾಗಿ ಕಳೆಗುಂದಿವೆ.

ನೆರವಿಗಾಗಿ ಹಲವು ರಾಜಕೀಯ ಪಕ್ಷಗಳ ಅನೇಕ ನಾಯಕರನ್ನು ಭೇಟಿಯಾದ್ದರೂ ತೆಂಗು ಬೆಳೆಗಾರರಿಗೆ  ಯಾವುದೇ ಸರ್ಕಾರ ಸೂಕ್ತ ಪರಿಹಾರ ನೀಡಲಿಲ್ಲ ಎಂದು ದೊಡ್ಡಮೆಟ್ಟಿಕುರ್ಕೆ ಗ್ರಾಮದ ತೆಂಗು ಬೆಳೆಗಾರ ಮರುಳ ಸಿದ್ದಪ್ಪ ಆರೋಪಿಸುತ್ತಾರೆ.

ತಾಲೂಕಿನ  ಬಾಣವಾರ ಹೋಬಳಿಯ ದೊಡ್ಡಮೆಟ್ಟಿಕುರ್ಕೆ, ದೇಶಾನಿ, ಜೆ, ಸಿ, ಪುರ, ಕನಕಟ್ಟೆ ಮೊದಲಾದ ಕಡೆಗಳಲ್ಲಿ ಬೋರ್ ವೆಲ್ ನಲ್ಲಿ ಅಂತರ್ಜಲ ಪ್ರಮಾಣ ಕುಸಿತದಿಂದಾಗಿ ಸಣ್ಣ ತೆಂಗು ಬೆಳೆಗಾರರು ಬೆಳೆದಿದ್ದ ಮರಗಳೆಲ್ಲಾ ಒಣಗುವಂತಾಗಿದೆ. ಇದರಿಂದಾಗಿ ಸಣ್ಣ ರೈತರು ಹತ್ತಿರದ ಜಿಲ್ಲೆಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿರುವುದಾಗಿ ಬಸವರಾಜ್ ಹೇಳುತ್ತಾರೆ.

 ಚುನಾವಣೆ ಮುಗಿಯುವವರೆಗೂ ರಾಜಕೀಯ ನಾಯಕರು ಆಹಾರ, ದುಡ್ಡು ಕೊಡುತ್ತಾರೆ . ಚುನಾವಣೆ ಮುಗಿದ ನಂತರ  ಮತ್ತೆ ಹೊಟ್ಟೆ ಹಸಿದುಕೊಂಡೆ ಇರಬೇಕಾಗುತ್ತದೆ ಎಂದು ಉಂಡಿಗನಾಲು ಗ್ರಾಮದ ಹಲಗೇ ಗೌಡ ಹೇಳುತ್ತಾರೆ.

ಕೇರಳದಲ್ಲಿ ತೆಂಗು ಬೆಳೆಯಿಂದ ಸಂಕಷ್ಟಕ್ಕೊಳಗಾದವರಿಗೆ 7 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಆದರೆ. ಅದೇ  ಮಾದರಿಯಲ್ಲಿ ಪರಿಹಾರ ಒದಗಿಸಲು ಕೇಂದ್ರ ಹಾಗೂ ರಾಜ್ಯಸರ್ಕಾರ ಇಲ್ಲಿಯವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸಣ್ಣ ರೈತ ಸಿದ್ದಯ್ಯ ಆಕ್ರೋಶ ವ್ಯಕ್ತಪಡಿಸುತ್ತಾರೆ.

 ರಾಜ್ಯಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನಾಲ್ಕು ತಿಂಗಳ ಹಿಂದೆ ಅರಸೀಕೆರೆಯಲ್ಲಿ ಶಾಸಕ ಕೆ. ಎಂ.ಶಿವಲಿಂಗೇಗೌಡ ನೇತೃತ್ವದಲ್ಲಿ ಧರಣಿ ನಡೆಸಲಾಗಿತ್ತು.  ರಾಜ್ಯದಲ್ಲಿ ತೆಂಗು ಬೆಳೆಯುವ 13 ಜಿಲ್ಲೆಗಳ 45 ತಾಲೂಕುಗಳಲ್ಲಿ  44 ಲಕ್ಷ ತೆಂಗಿನ ಮರಗಳು ಕಳೆದ ಕೆಲ ವರ್ಷಗಳಿಂದಲೂ ಕಳೆಗುಂದಿವೆ ಎಂದು  ತೋಟಗಾರಿಕೆ ಇಲಾಖೆ ಮೂಲಗಳು ಹೇಳುತ್ತವೆ.

ಕೇಂದ್ರ ಬಜೆಟ್ ರೈತ ವಿರೋಧಿಯಾಗಿದ್ದು, ತೋಟಗಾರಿಕೆ ಕ್ಷೇತ್ರಕ್ಕೆ ಯಾವುದೇ ಮೀಸಲಿಟ್ಟಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫ್ಲೋರೋಸಿಸ್ ಅರಸೀಕೆರೆ ತಾಲೂಕಿನ ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ.  ಸುಮಾರು 45 ಹಳ್ಳಿಗಳು  ಫ್ಲೋರೋಸಿಸ್ ಬಾಧಿತವಾಗಿವೆ.  ಈ ಹಳ್ಳಿಗಳ ನೀರಿನಲ್ಲಿ 2.5 ಪಿಪಿಎಂಗೂ ಹೆಚ್ಚು ಪ್ಲೊರೆಡ್ ಅಂಶ ಹೆಚ್ಚಾಗಿದ್ದು, ಹಲ್ಲು ಮತ್ತು ಚರ್ಮದ ಫ್ಲೋರೋಸಿಸ್ ನಿಂದ ಜನರು ನೋವು ಅನುಭವಿಸುತ್ತಿದ್ದಾರೆ.

 ಅನೇಕ ಕಡೆಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಆರೋಗ್ಯ ಇಲಾಕೆ  ಶುದ್ದ ಕುಡಿಯು ನೀರು ಘಟಕ ಸ್ಥಾಪಿಸುವ ಮೂಲಕ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಂಡಿವೆ .ಫ್ಲೋರೋಸಿಸ್  ತಡೆಗಾಗಿ ಸರ್ಕಾರ ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಹಲ್ಲಿನ ಸಮಸ್ಯೆಯಿಂದ ಬಳಲುತ್ತಿರುವ ಸಿದ್ದಮ್ಮ ಆರೋಪಿಸಿದ್ದಾರೆ. 

ಲಿಂಗಾಯಿತ ಪ್ರಾಬಲ್ಯವಿರುವ ಅರಸೀಕೆರೆ ತಾಲೂಕಿನಲ್ಲಿ ಎರಡು ಅವಧಿಯಲ್ಲೂ ಒಕ್ಕಲಿಗ ಸಮುದಾಯದ ಕೆ.ಎಂ. ಶಿವಲಿಂಗೇಗೌಡ ಶಾಸಕರಾಗಿದ್ದಾರೆ.  ಕ್ಷೇತ್ರದಲ್ಲಿನ ಇತರ ಸಮಸ್ಯೆಗಳೊಂದಿಗೆ ಜಾತಿ ಲೆಕ್ಕಾಚಾರವೂ ಮಹತ್ವದ ಪಾತ್ರ ವಹಿಸಲಿದೆ.  ಹಲವು ಅಭಿವೃದ್ದಿ ಕಾರ್ಯ ಕೈಗೊಳ್ಳುವ ಮೂಲಕ ಶಾಸಕ ಶಿವಲಿಂಗೇಗೌಡ ಕ್ಷೇತ್ರದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.


 




SCROLL FOR NEXT