ಬೆಂಗಳೂರು: ಅಪಘಾತಕ್ಕೀಡಾಗಿ ನರಳುತ್ತಿದ್ದ ಗಾಯಾಳುಗಳಿಗೆ ನೆರವು ನೀಡುವ ಮೂಲಕ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಜಮೀರ್ ಅಹಮದ್ ಅವರು ಮಾನವೀಯತೆ ಮೆರೆದಿದ್ದಾರೆ.
ನಗರದ ಕಾವೇರಿ ಜಂಕ್ಷನ್ ಬಳಿ ರಸ್ತೆ ತಿರುವಿನಲ್ಲಿ ದ್ವಿಚಕ್ರ ವಾಹನಕ್ಕೆ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಯುರ್ವೇದ ವೈದ್ಯರೊಬ್ಬರು ಮೃತಪಟ್ಟಿದ್ದರು. ಹಲಸೂರಿನ ಬಾಬು (52) ಮೃತ ವೈದ್ಯರಾಗಿದ್ದಾರೆ.
ವಾಹನದ ಹಿಂದೆ ಕುಳಿತಿದ್ದ ರಜನಿ (57) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಅಭಿಜಿತ್ ಪಾಲ್ (46) ಎಂಬಾತನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಾಬು ಆಯುರ್ವೇದಿಕ್ ವೈದ್ಯರಾಗಿದ್ದು, ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪರಿಚಯಸ್ಥ ರಜನಿ ಜೊತೆಗೆ ಕೆಲಸದ ನಿಮಿತ್ತ ಹೆಬ್ಬಾಳ ಕಡೆ ತೆರಳುತ್ತಿದ್ದರು. ಕಾವೇರಿ ಜಂಕ್ಷನ್ ಬಳಿ ತಿರುವು ತೆಗೆದುಕೊಳ್ಳುವಾಗ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಬು ಬಲಭಾಗಕ್ಕೆ ಬಿದ್ದಿದ್ದು, ಇವರ ಮೇಲೆ ಲಾರಿ ಹರಿದಿದೆ.
ಗಂಭೀರವಾಗಿ ಗಾಯಗೊಂಡ ಬಾಬುರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆಂಮದು ಪೊಲೀಸರು ಹೇಳಿದ್ದಾರೆ.
ಕಾವೇರಿ ಜಂಕ್ಷನ್ ಬಳಿ ಸಿಮೆಂಟ್ ಮಿಕ್ಸರ್ ಲಾರಿ ಬೈಕ್'ಗೆ ಡಿಕ್ಕಿ ಹೊಡೆಗು ಗಂಭೀರವಾಗಿ ಗಾಯಗೊಂಡಿದ್ದ ವೈದ್ಯನನ್ನು ಆಸ್ಪತ್ರೆಗೆ ಸೇರಿಸಲು ಸಚಿವ ಜಮೀರ್ ಅಹ್ಮದ್ ಅವರು ನೆರವಾದರು ಎಂದು ಮಾಹಿತಿ ನೀಡಿದರು.
ಅಪಘಾತ ಸಂಭವಿಸಿದ ವೇಳೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಜಮೀರ್ ಅಹಮದ್ ಅವರು ಅದೇ ರಸ್ತೆಯಲ್ಲಿ ಬಂದಿದ್ದಾರೆ. ಅಪಘಾತ ಸಂಭವಿಸಿದ ಸ್ಥಳದಲ್ಲಿ ಸೇರಿದ್ದ ಜನರನ್ನು ಕಂಡ ಕೂಡಲೇ ಆ್ಯಂಬುಲೆನ್ಸ್'ಗೆ ಕರೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ. ಅಲ್ಲದೆ, ತನ್ನ ಗನ್ ಮ್ಯನ್ ಕುಮಾರ್ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.