ಹಾಸನ: ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಪರಿಣಾಮ ಸಕಲೇಶಪುರದಲ್ಲಿ ಅಪಾಯದಲ್ಲಿ ಸಿಲುಕಿದ್ದ 16 ರೈಲ್ವೇ ಸಿಬ್ಬಂದಿಗಳನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ರೈಲ್ವೇ ಸಿಬ್ಬಂದಿಗಳು ಅಪಾಯದಲ್ಲಿ ಸಿಲುಕಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಸಕಲೇಶಪುರ ಸಹಾಯಕ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ತಹಶೀಲ್ದಾರ್ ಗಿರೀಶ್ ನಂದನ್ ಅವರ ಸಹಾಯದೊಂದಿಗೆ ಕಂದಾಯ ಅಧಿಕಾರಿಗಳು ರಕ್ಷಣೆಗೆ ಧಾವಿಸಿದ್ದರು.
ಆಗಸ್ಟ್ 14 ರಂದು ಭೂಕುಸಿತ ಸಂಭವಿಸಿದ ಪರಿಣಾಮ ಯಡಕುಮಾರಿ ರೈಲ್ವೇ ನಿಲ್ದಾಣದಲ್ಲಿ ಸಿಬ್ಬಂದಿಗಳು ಅಪಾಯಕ್ಕೆ ಸಿಲುಕಿಕೊಂಡಿದ್ದರು. ಇದರಂತೆ ಮಾಹಿತಿ ತಿಳಿದ ಅಧಿಕಾರಿಗಳು ವೈದ್ಯರೊಂದಿಗೆ ಸ್ಥಳಕ್ಕೆ ಧಾವಿಸಿ ಸಿಬ್ಬಂದಿಗಳನ್ನು ರಕ್ಷಣೆ ಮಾಡಿದರು.
ರಕ್ಷಣಾ ಕಾರ್ಯಾಚರಣೆಗೂ ಮುನ್ನ ರೈಲ್ವೇ ವಿಭಾಗೀಯ ನಿರ್ವಾಹಕರು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಬಳಿ ಮನವಿ ಮಾಡಿಕೊಂಡಿದ್ದರು. ನಿಲ್ದಾಣದಿಂದ ಸಿಬ್ಬಂದಿಗಳನ್ನು ರಕ್ಷಣೆ ಮಾಡಲು ಸಾಧ್ಯವಾಗದ ಕಾರಣ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡುವಂತೆ ತಿಳಿಸಿದ್ದರು. ಆದರೆ, ಹೆಲಿಕಾಪ್ಟರ್ ಕಾರ್ಯಾಚರಣೆ ಸಾಧ್ಯವಾಗದ ಹಿನ್ನಲೆಯಲ್ಲಿ ಟ್ರಕ್ಕಿಂಗ್ ಮಾರ್ಗದ ಮೂಲಕ ತೆರಳಿ ಸಿಬ್ಬಂದಿ ರಕ್ಷಣೆ ಮಾಡಲಾಯಿತು.
ಈ ನಡುವೆ ರೈಲ್ವೇ ಅಧಿಕಾರಿಗಳು ಭೂಕುಸಿತ ಉಂಟಾದ ಹಿನ್ನಲೆಯಲ್ಲಿ ಯಶವಂತಪುರದಿಂದ ಕಾರವಾರಕ್ಕೆ ಸುಬ್ರಮಣ್ಯ ಮತ್ತು ಮಂಗಳೂರು ಮಾರ್ಗದಲ್ಲಿ ಚಲಿಸುವ ರೈಲುಗಳನ್ನು ರದ್ದು ಮಾಡಿದ್ದಾರೆ.