ಬೆಂಗಳೂರು: ನಗರದಲ್ಲಿ ಏಕಾಂಗಿಯಾಗಿ ನೆಲೆಸಿರುವ ವೃದ್ದರ ಮನೆಗಳನ್ನೇ ಗುರಿ ಮಾಡಿಕೊಂಡು ದರೋಡೆ ನಡೆಸುತ್ತಿದ್ದ ಗೌರಿ ಬಿದನೂರು ಗ್ಯಾಂಗ್'ನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧನಕ್ಕೊಪಡಿಸಿದ್ದಾರೆ.
ಗೌರಿಬಿದನೂರು ತಾಲೂಕಿನ ಪಿ.ನಾಗೇನಹಳ್ಳಿ ಗ್ರಾಮದ ಎನ್.ವೈ. ನಾಗರಾಜ್, ರವಿ ಕುಮಾರ್, ಗಂಗಾಧರ್, ಗಂಗಾರಾಜು ಹಾಗೂ ಕೊರಟೆಗೆ ತಾಲೂಕಿನ ಬಸವನಹಳ್ಳಿಯ ಬಸರವಾಜ್ ಬಂಧಿತ ದರೋಡೆಕೋರರಾಗಿದ್ದಾರೆ.
ಆರೋಪಿಗಳಿಂದ ಪೊಲೀಸರು ರೂ.25 ಲಕ್ಷ ಮೊಲ್ಯದ 750 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ದೇಶಬಂಧು ನಗರದಲ್ಲಿ 85 ವರ್ಷದ ಇಲಾ ಚಂದ್ರಶೇಖರ್ ಅವರ ಮನೆಗೆ ನುಗ್ಗಿದ್ದ ಈ ಗ್ಯಾಂಗ್ ದರೋಡೆ ನಡೆಸಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ದರೋಡೆಕೋರರನ್ನು ಬಂಧನಕ್ಕೊಳಪಡಿಸಿದ್ದಾರೆ.
ದರೋಡೆ ನಡೆಸುವ ಸಲುವಾಗಿಯೇ ಈ ಗ್ಯಾಂಗ್ ನಗರಕ್ಕೆ ಬರುತ್ತಿತ್ತು. ಹಗಲು ಹೊತ್ತಿನಲ್ಲಿ ವಸತಿ ಪ್ರದೇಶಗಳಲ್ಲಿ ಸಂಚರಿಸಿ ವೃದ್ದರ ಮನೆಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದರು. ಬಳಿಕ ಪೂರ್ವ ನಿಗದಿತ ಮನೆಗಳಿಗೆ ರಾತ್ರಿ ವೇಳೆ ನುಗ್ಗುತ್ತಿದ್ದ ಅವರು, ಮನೆಯಲ್ಲಿ ವೃದ್ಧರಿಗೆ ಜೀವ ಬೆದರಿಕೆ ಹಾಕಿ ನಗ-ನಾಣ್ಯ ದೋಚಿ ಪರಾರಿಯಾಗುತ್ತಿದ್ದರು.
ಇದೇ ರೀತಿಯಲ್ಲಿಯೇ ಕೆಲ ದಿನಗಳ ಹಿಂದಷ್ಟೇ ವಿದ್ಯಾರಣ್ಯಪುರ ದೇಶಬಂಧು ನಗರದಲ್ಲಿಯೂ 85 ವರ್ಷದ ಇಲಾ ಚಂದ್ರಶೇಖರ್ ಹಾಗೂ ನ್ಯಾಯಾಂಗ ಬಡಾವಣೆಯಲ್ಲಿ ಮತ್ತೊಂದು ಮನೆಯಲ್ಲಿ ದರೋಡೆ ಎಸಗಿದ್ದರು. ಅಲ್ಲದೆ, ಈ ತಂಡವು ಹೆಚ್ಚಾಗಿ ನಗರದ ಹೊರವಲಯದ ಮನೆಗಳನ್ನೇ ಹೆಚ್ಚು ಗುರಿ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮನೆಯಲ್ಲಿ ನಾನು ಒಬ್ಬನೇ ಇದ್ದೆ. ಈ ವೇಳೆ ಮನೆಗೆ ನುಗ್ಗಿದ ಗುಂಪೊಂದು ನನ್ನ ಬಾಯಿಯನ್ನು ಕಟ್ಟಿ ಹಾಕಿ, ಮಾರಾಕಾಸ್ತ್ರಗಳಿಂದ ಬೆದರಿಕೆ ಹಾಕಿದರು. ಬಳಿಕ ಮನೆಯಲ್ಲಿದ್ದ ಹಣ ಹಾಗೂ ಚಿನ್ನವನ್ನು ದೋಚಿ ಪರಾರಿಯಾದರು. ಘಟನೆ ಬಳಿಕ ನಾನು ಭೀತಿಗೊಳಗಾಗಿದ್ದೆ. ಬಳಿಕ ನೆರೆಮನೆಯವರ ಸಹಾಯದೊಂದಿಗೆ ಪೊಲೀಸರಿಗೆ ದೂರು ನೀಡಿದ್ದೆ ಎಂದು ಇಲಾ ಚಂದ್ರಶೇಖರ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos