ಬೆಂಗಳೂರು: ಅಕ್ರಮ ಜಾಹೀರಾತು ಫಲಕ ತೆರವು ವಿಚಾರ ಕಾರ್ಯವನ್ನು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ತಮ್ಮ ಕರ್ತವ್ಯವೆಂದು ಮಾಡುತ್ತಿಲ್ಲ, ನ್ಯಾಯಾಲಯ ಆದೇಶ ನೀಡುತ್ತಿರುವುದರಿಂದ ಮಾಡಬೇಕು ಎಂಬಂತಿದೆ ಎಂದು ಬಿಬಿಎಂಪಿ ವಿರುದ್ಧ ಹೈಕೋರ್ಟ್ ಸೋಮವಾರ ತೀವ್ರವಾಗಿ ಕಿಡಿಕಾರಿದೆ.
ನಗರದಲ್ಲಿ ಅನಧಿಕೃತವಾಗಿ ಜಾರೀರಾತು ಫಲಕಗಳ ಹಾವಳಿ ವಿರುದ್ಧ ಸಲ್ಲಿಕೆಯಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಾಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ಪೀಠ ನಿನ್ನೆ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬಿಬಿಎಂಪಿ ವಕೀಲ ವಿ. ಶ್ರೀನಿಧಿಯವರನ್ನು ಪ್ರಶ್ನಿಸಿದ ನ್ಯಾಯಾಲಯ, ನಿಮ್ಮ ಆಯುಕ್ತರ ಸಮಸ್ಯೆಯಾದರೂ ಏನು? ನಿಮ್ಮ ಆಯುಕ್ತರು ನ್ಯಾಯಾಲಯವೇ ಅವರಿಗೆ ಬಲವಂತದಿಂದ ಕೆಲಸ ಮಾಡಿಸುತ್ತಿರುವಂತೆ ವರ್ತಿಸುತ್ತಿದ್ದಾರೆ. ತಮ್ಮ ಕರ್ತವ್ಯ ನಿಭಾಯಿಸುವಂತೆ ತಿಳಿಸಿದರೆ, ನಿಮ್ಮ ಆಯುಕ್ತರಿಗೆ ಅದು ನಿರ್ದೇಶನವೇ? ಆಯುಕ್ತರು ನಿಮ್ಮ ಹಿಂದೆ ನಿಂತಿದ್ದಾರೆ. ನ್ಯಾಯಾಲಯದ ಆದೇಶದಂತೆ ಕೆಲಸ ಮಾಡಲು ಅವರಿಗೆ ಆಗದಿದ್ದರೆ, ಅದನ್ನು ಅವರು ಹೇಳಲಿ. ಅರ್ಹ ಅಧಿಕಾರಿಯನ್ನು ನೇಮಿಸುತ್ತೇವೆಂದು ತಿಳಿಸಿದೆ.
ಬೆಸ್ಕಾಂ ನಿರ್ವಾಹಕ ನಿರ್ದೇಶಕರೊಂದಿಗೆ ಮಾತನಾಡಿದ್ದ ಮಂಜುನಾಥ್ ಪ್ರಸಾದ್ ಅವರು, ಅನಧಿಕೃತ ಜಾಹೀರಾತು ಫಲಕಗಳಿಗೆ ನೀಡಲಾಗಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ತಿಳಿಸಿದ್ದರು. ನ್ಯಾಯಾಲಯದ ಆದೇಶವಿರುವುದರಿಂದ ಕಡಿತಗೊಳಿಸುವಂತೆ ತಿಳಿಸಿದ್ದರು ಎಂದು ಹಿರಿಯ ವಕೀಲರು ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ, ನ್ಯಾಯಾಲಯವೇ ನಿಮ್ಮನ್ನು ಬಲವಂತದಿಂದ ಕೆಲಸ ಮಾಡುವಂತೆ ಮಾಡಿದೆ ಎಂಬ ಭಾವನೆಯನ್ನೇ ಹುಟ್ಟಿಸುತ್ತಿದ್ದೀರಿ ಎಂದು ಪ್ರಶ್ನಿಸಿತು. ಅಲ್ಲದೆ. ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆ ಎಷ್ಟು ಮುಗಿದಿದೆ ಎಂದು ಬಿಬಿಎಂಪಿ ವಕೀಲರನ್ನು ಪ್ರಶ್ನಿಸಿದರು.
ಬಿಬಿಎಂಪಿ ಪರ ವಕೀಲರು ಕೋರ್ಟ್ ತಡೆಯಾಜ್ಞೆ ಇರುವ ಕಾರಣ ನಗರದ 8ನೇ ಮೈಲಿಕಲ್ಲು ಪ್ರದೇಶದಲ್ಲಿರುವ ಫ್ಲೆಕ್ಸ್ ಗಳನ್ನು ತೆರವು ಮಾಡಿಲ್ಲ ಎಂದು ಉತ್ತರಿಸಿದರು.
ಅದಕ್ಕೆ ಅತೃಪ್ತಿಗೊಂಡ ನ್ಯಾಯಮೂರ್ತಿಗಳು, ನಗರದಲ್ಲಿ ಅಕ್ರಮ ಜಾಹೀರಾತುಗಳನ್ನು ಸಂಪೂರ್ಣವಾಗಿ ತೆಗೆಯಬೇಕು. ಈ ಕೆಲಸ ಮಾಡಲಾಗುತ್ತದೆಯೇ ಅಥವಾ ಇಲ್ಲವೋ ಎಂಬುದನ್ನು ನಮಗೆ ತಿಳಿಸಿ. ಈ ವಿಚಾರದಲ್ಲಿ ಅಧಿಕಾರಿಗಳು ಶೇ.99 ರಷ್ಟು ಕೆಲಸ ಮಾಡಿದರೂ ನ್ಯಾಯಾಲಯ ಒಪ್ಪುವುದಿಲ್ಲ. ಅಧಿಕಾರಿಗಳು ಶೇ.100ರಷ್ಟು ಕೆಲಸ ಮಾಡಬೇಕು. ಕೊಂಚವೂ ಲೋಕವಿಲ್ಲದೆ ಕರ್ತವ್ಯ ನಿರ್ವಹಿಸಬೇಕು ಎಂದರು.
ವಿಚಾರಣೆ ವೇಳೆ ಸರ್ಕಾರಿ ವಕೀಲರು, ನಗರದಲ್ಲಿ ಅನಧಿಕೃತ ಫ್ಲೆಕ್ಸ್ ಗಳ ಅಳವಡಿಕೆಗೆ ಸಂಬಂಧಿಸಿದಂತೆ 200 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಈ 200 ಪ್ರಕರಣಗಳಲ್ಲಿ ಒಟ್ಟು 33 ಮಂದಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಕುರಿತ ಎಲ್ಲಾ ಪ್ರಕರಣಗಳನ್ನು ಒಂದು ನ್ಯಾಯಾಲಯಕ್ಕೆ ಅಂದರೆ, 56ನೇ ಎಸಿಎಂಎಂ ಕೋರ್ಟ್'ಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
ಇದರಂತೆ 33 ಮಂದಿ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಪ್ರಕರಣಗಳ ಮಾಹಿತಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಆ.21ಕ್ಕೆ ಮುಂದೂಡಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos