ಕೊಡಗು: ಭೀಕರ ಪ್ರವಾಹದಿಂದ ತತ್ತರಿಸಿರುವ ಕೊಡಗಿನಲ್ಲಿರುವ ದೇವಸ್ಥಾನ, ಚರ್ಚ್ ಹಾಗೂ ಮದರಸಾಗಳು ಈಗ ನಿರಾಶ್ರಿತ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಸಂಕಷ್ಟ ಕಾಲದಲ್ಲಿ ಕೋಮು ಸಾಮರಸ್ಯಕ್ಕೆ ಸ್ಪೂರ್ತಿಯಾಗಿದೆ.
ಸುಂಟಿಕೊಪ್ಪ ಸಮೀಪದ ಶಿವ ದೇವಾಲಯ, ಸೆಂಟ್ ಮೇರಿ ಚರ್ಚ್ ಹಾಗೂ ಮದ್ರಾಸ್ ಗಳು ನಿರಾಶ್ರಿತ ಶಿಬಿರಗಳಾಗಿ ಮಾರ್ಪಟ್ಟಿದ್ದು, ಸುಮಾರು 600 ಮಂದಿ ಆಶ್ರಯ ಪಡೆದಿದ್ದಾರೆ.
ಮದರಸಾ ಸಮುದಾಯ ಅಡಿಗೆಮನೆಯ ಸಾಮಾನ್ಯ ಸ್ಥಳದಲ್ಲಿ ಆಹಾರ ತಯಾರಿಸಲಾಗುತ್ತಿದ್ದು, ಅದನ್ನು ದೇವಾಲಯ ಮತ್ತು ಚರ್ಚ್ ಗಳಲ್ಲಿರುವ ಪ್ರವಾಹ ಸಂತ್ರಸ್ತರಿಗೆ ಒದಗಿಸಲಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.
ಇನ್ನು ಕೊಡಗಿನ ಜನತೆಯ ಕೋಮು ಸಾಮರಸ್ಯವನ್ನು ಕೊಂಡಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕದ ಕೊಡಗಿನಲ್ಲಿ ಉಂಟಾದ ಭೀಕರ ಪ್ರವಾಹ ರಾಜ್ಯವನ್ನು ಕಂಗೆಡಿಸಿದೆ. ಆದರೆ ಈ ಸಂಕಷ್ಟದ ನಡುವಲ್ಲೇ ಒಂದು ಭರವಸೆಯ ಓಯಾಸಿಸ್ ಆಗಿ ಕೊಡಗಿನ ಸುಂಟಿಕೊಪ್ಪ ಎಂಬ ನಗರದಲ್ಲಿ ಕಾಣಿಸುತ್ತಿದೆ. ಇಲ್ಲಿ ಶಿವ, ರಾಮ, ಕ್ರಿಸ್ತ, ಅಲ್ಲಾಹ್ ಮತ್ತು ಬುದ್ಧ ಎಲ್ಲರೂ ಸಂತ್ರಸ್ತರಿಗೆ ಪರಿಹಾರ ನೀಡಲು, ಆಶ್ರಯ ನೀಡಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇದು ಭಾರತ! ಎಂದು ಟ್ವೀಟ್ ಮಾಡಿದ್ದಾರೆ.
ನೈಸರ್ಗಿಕ ವಿಕೋಪಗಳು ಮನುಷ್ಯನ ಅಹಂಕಾರವನ್ನು ಬುಡಮೇಲು ಮಾಡುತ್ತವಂತೆ. ಇದೀಗ ಕರ್ನಾಟಕ ಮತ್ತು ಕೇರಳದಲ್ಲಿ ಉಂಟಾಗಿರುವ ಪ್ರವಾಹ ಅಂಥ ಪರಿಸ್ಥಿತಿಯನ್ನು ತಂದಿಟ್ಟಿದೆ. ಸುಂಟಿಕೊಪ್ಪದ ಜನರು ಮಂದಿರ, ಮಸೀದಿ, ಚರ್ಚ್ ಗಳಲ್ಲಿ ಒಟ್ಟಾಗಿ ಆಶ್ರಯ ಪಡೆದಿದ್ದು, ಇದು ಕೋಮುಸೌಹಾರ್ದದ ಪ್ರತೀಕವಾಗಿ ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.