ರಾಜ್ಯ

ಕೊಡಗು ಪ್ರವಾಹ: ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಇದುವರಗೆ ರೂ.25 ಕೋಟಿ ಸಂಗ್ರಹ

Manjula VN
ಬೆಂಗಳೂರು: ಪ್ರವಾಹದಿಂದ ಕಂಗೆಟ್ಟಿರುವ ಕೊಡಗು ಜಿಲ್ಲೆಯ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿರುವ ರಾಜ್ಯದ ಜನತೆ ಹಾಗೂ ವಿವಿಧ ಸಂಘಟನೆಗಳು ನೆರವಿನ ಮಹಾಪೂರವನ್ನೇ ಹರಿಸಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಯಲ್ಲಿ ಒಟ್ಟು 25.16 ಕೋಟಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. 
ಚೆಕ್, ಆನ್'ಲೈನ್ ನಲ್ಲಿ ಜನರು ದೇಣಿಗೆ ನೀಡುವ ಮೂಲಕ ಸಂತ್ರಸ್ತರ ನೆರವಿಗೆ ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ. ಶುಕ್ರವಾರ ವೇಳೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.25,16,89,808 ಸಂಗ್ರಹವಾಗಿದೆ. 
ಡಿಡಿ ಮೂಲಕ ರೂ. 13,59,90,418, ಚೆಕ್, ಪೇಟಿಯಂ ಮೂಲಕ ರೂ.9,06,99,390.44 ಸಂಗ್ರಹವಾಗಿದ್ದು, ಇತರೆ ಸಂಘಟನೆಗಳು, ವೈದ್ಯ ಸಮೂಹ, ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘಗಳ ದೇಣಿಗೆಯಿಂದ ಒಟ್ಟು ರೂ.2.5ಕೋಟಿ ಸಂಗ್ರಹವಾಗಿದೆ. 
ಸಂತ್ರಸ್ತರಿಗೆ ಸಾಕಷ್ಟು ಮಂದಿ ದೇಣಿಗೆ ನೀಡಿ ಸಹಾಯಹಸ್ತ ಚಾಚಿದ್ದಾರೆ. ಜನತೆಗೆ ಈ ಮೂಲಕ ಧನ್ಯವಾದಗಳನ್ನು ಹೇಳುತ್ತೇನೆ. ಮತ್ತಷ್ಟು ಮಂದಿ ದಾನ ಮಾಡಲು ಜನರು ದೇಣಿಗೆದಾರರು ಪ್ರೇರಣೆ ನೀಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದ್ದಾರೆ. 
ಪ್ರವಾಹ ಪರಿಸ್ಥಿತಿ ಕುರಿತಂತೆ ಕುಮಾರಸ್ವಾಮಿಯವರು ಪ್ರಧಾನಿ ಮೋದಿ, ಕೇಂದ್ರ ಸಚಿವರು ಹಾಗೂ ರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದು, ವಿವರಣೆ ನೀಡಿದ್ದಾರೆ. ಕೇಂದ್ರದಿಂದ ರೂ.2,000 ಕೋಟಿ ಪರಿಹಾರವನ್ನು ಕೇಳಿದ್ದೇವೆ. ನೆರೆ ಸಂತ್ರಸ್ತರ ಜೀವನಗಳನ್ನು ಪುನರ್ ನಿರ್ಮಾಣ ಮಾಡಲು ನಮಗೆ ಕೇಂದ್ರದ ಮಧ್ಯಸ್ಥಿಕೆಯ ಅವಶ್ಯಕತೆ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ. 
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವ ಇಚ್ಛಿಸುವವರು ಈ ಕೆಳಕಂಡ ಖಾತೆಗೆ ಜಮಾವಣೆ ಮಾಡಬಹುದು. 
ಖಾತೆ ಸಂಖ್ಯೆ: 37887098605
ಐಎಫ್ಎಸ್'ಸಿ ಕೋಡ್: SBIN0040277
ಎಂಐಸಿಆರ್ ಸಂಖ್ಯೆ: 560002419
SCROLL FOR NEXT