ನವದೆಹಲಿ: ಕರ್ನಾಟಕ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಅಣೆಕಟ್ಟಿಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ, ಸೋಮವಾರ ನಡೆದ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಸಭೆಯಲ್ಲೂ ಕೂಡ ಖ್ಯಾತೆ ತೆಗೆದಿದ್ದು, ಈ ಆಕ್ಷೇಪಣೆಯನ್ನು ನಿರ್ವಹಣಾ ಪ್ರಾಧಿಕಾರ ತಿರಸ್ಕರಿಸಿದೆ.
ಜಲ ನಿರ್ವಹಣಾ ಪ್ರಾಧಿಕಾರದ ಎದುರು ನಿನ್ನೆ ಪ್ರಾಸ್ತಾವಿಕವಾಗಿ ಮಾತನಾಡುವ ವೇಳೆ ತಮಿಳುನಾಡು ಆಕ್ಷೇಪ ಸಲ್ಲಿಸಿದ್ದು, ಇದಕ್ಕೆ ಉತ್ತರಿಸಿರುವ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ಅವರು, ಕೇಂದ್ರೀಯ ಜಲ ಆಯೋಗವು ಕೇವಲ ಕಾರ್ಯಸಾಧು ವರದಿಗಷ್ಟೇ ಒಪ್ಪಿಯೆ ನೀಡಿದೆ. ಅಣೆಕಟ್ಟು ಕಟ್ಟಲು ಅಲ್ಲ. ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಲು ಆಯೋಗ ಸೂಚಿಸಿದೆ. ಡಿಪಿಆರ್ ಕೇಳಿರುವುದು ವಿವಾದ ಆಗುವಂತಹ ವಿಚಾರವೇನಲ್ಲ ಎಂದು ಹೇಳಿದ್ದಾರೆ.
ಡಿಪಿಆರ್ ಸಲ್ಲಿಕೆಯಾದ ಬಳಿಕ ಅದನ್ನು ಜಲ ನಿರ್ವಹಣಾ ಪ್ರಾಧಿಕಾರ ಅವಲೋಕಿಸಲಿದೆ. ಎಲ್ಲಾ ರಾಜ್ಯಗಳ ಅಭಿಪ್ರಾಯ ಆಲಿಸಲಿದೆ. ನಿರ್ವಹಣಾ ಪ್ರಾಧಿಕಾರ ಒಪ್ಪಿಗೆಯ ಬಳಿಕ ಅದನ್ನು ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ಕಳಿಹಿಸಿಕೊಡಲಾಗುವುದು. ಸರ್ಕಾರ ಒಪ್ಪಿದರೆ ಮಾತ್ರ ಯೋಜನೆ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಆದರೆ, ಮೇಕೆದಾಟು ಯೋಜನೆಯ ಬಗ್ಗೆ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚೆಗಳು ನಡೆದಿಲ್ಲ. ಆದಾಗಿಯೂ ತಮಿಳುನಾಡಿನ ಆಕ್ಷೇಪಗಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಸಭೆ ಬಳಿಕ ಹುಸೇನ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಉತ್ತಮ ಮಳೆಯಾದ ಕಾರಣ ತಮಿಳುನಾಡಿಗೆ ಚೆನ್ನಾಗಿ ನೀರು ಹರಿದುಬಂದಿದೆ. ಹೀಗಾಗಿ ಯಾವುದೇ ಸಮಸ್ಯೆಗಳಿಲ್ಲ. ಮುಂದಿನ ಸಭೆ ಜನವರಿ ತಿಂಗಳಿನಲ್ಲಿ ನಡೆಯಲಿದೆ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos