ರಾಜ್ಯ

ಆಂಬಿಡೆಂಟ್ ವಂಚನೆ ಪ್ರಕರಣ: ಸಿಸಿಬಿ ಪೋಲೀಸರಿಂದ ಮಾಜಿ ಪತ್ರಕರ್ತನ ಬಂಧನ

Raghavendra Adiga
ಬೆಂಗಳೂರು: ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ವಂಚನೆ ಪ್ರಕರಣ ಸಂಬಂಧ ಕೇಂದ್ರೀಯ ಅಪರಾಧ ದಳದ(ಸಿಸಿಬಿ) ಪೋಲೀಸರು ಮಾಜಿ ಪತ್ರಕರ್ತನೊಬ್ಬನನ್ನು ಬಂಧಿಸಿದಾರೆ.
ಬಂಧಿತನನ್ನು ಎಂ ಕೆ ಅಶೋಕ ಎಂದು ಗುರುತಿಸಲಾಗಿದೆ. ಡಿಸೆಂಬರ್ 12ರಂದು ಕೆಲ ಹೂಡಿಕೆದಾರರು ವ್ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ  ಪತ್ರಿಕಾಗೋಷ್ಠಿಯನ್ನು ನಡೆಸಿದ್ದರು. ಈ ವೇಳೆ ಜಯಿದ್ ಖಾನ್ ಹಾಗೂ ಸಿರಾಜುದ್ದೀನ್ ಎಂಬಿಬ್ಬರು ಹೂಡಿಕೆದಾರರು ಸಿಸಿಬಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಆಂಬಿಡೆಂಟ್ ಸಂಸ್ಥೆಯ ಮುಖ್ಯಸ್ಥ  ಸೈಯದ್ ಫರಿದ್ ಅಹ್ಮದ್ ನನ್ನು ಪೋಲೀಸರು ರಕ್ಷಿಸುತ್ತಿದ್ದಾರೆ ಎಂದು ಅವರು ದೂರಿದ್ದರು. ಸೈಯದ್  ಈ ಪ್ರಕರಣದಲ್ಲಿ ಎರಡು ದಿನಗಳ ಮುನ್ನ ಜಾಮೀನು ಪಡೆದಿದ್ದರು. ಅಲ್ಲದೆ ಭೂಗತ ಜಗತ್ತಿನ ದೊರೆಗಳೊಡನೆ ಸಿಸಿಬಿ ಅಧಿಕಾರಿಗಳು ಸಂಪರ್ಕ ಹೊಂದಿದ್ದಾರೆ ಎಂದೂ ಅವರುಗಳು ಆರೋಪಿಸಿದ್ದರು.
ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಸಿಬಿ ಮರುದಿನವೇ ವಿಧಾನಸೌಧ ಠಾಣೆಯಲಿ ಪ್ರಕರಣ ದಾಖಲಿಸಿದ್ದಲ್ಲದೆ ಆಂಬಿಡೆಂಟ್ ವಂಚನೆಯಲ್ಲಿ ಪ್ರಮುಖ ಪಾತ್ರವಘಿಸಿದ್ದ ವಿಜಯ್ ತಾತಾ ಎನ್ನುವಾತನನ್ನೂ ಸಹ ಆರೋಪಿಯಾಗಿ ಹೆಸರಿಸಿತು. ಇದೇ ವೇಳೆ  ಕ್ರಿಮಿನಲ್ ಪಿತೂರಿ ಹಾಗೂ ಕರ್ತವ್ಯ ನಿರತ ಪೋಲೀಸರನ್ನು ಅವಮಾನಿಸಿದ್ದಕ್ಕಾಗಿ ಜಯಿದ್ ಖಾನ್ ಹಾಗೂ ಸಿರಾಜುದ್ದೀನ್ ಮೇಲೆ ಸಹ ಪ್ರಕರಣ ದಾಖಲಾಗಿದೆ. ಈ ಇಬ್ಬರೂ ಸಮಾಜದಲ್ಲಿ ಸಿಸಿಬಿ ಮೇಲಿನ ವಿಶ್ವಾಸಾರ್ಹತೆಯನ್ನು ಕುಂದಿಸಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಬಳಿಕ ಆ ಇಬ್ಬರೂ ಹೂಡಿಕೆದಾರರ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದ್ದಾರೆ.
ಸಿಸಿಬಿಯನ್ನು ದೂಷಿಸುವ ಸಲುವಾಗಿ ಪತ್ರಿಕಾಗೋಷ್ಠಿ ನಡೆಸಿ "ಪಿತೂರಿ" ಮಾಡಲಾಗಿದೀನ್ನುವುದು ತಿಳಿದುಬಂದಿದ್ದು ವಿಜಯ್ ತಾತಾ ಇದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ಮಾಜಿ ಪತ್ರಕರ್ತ ಅಶೋಕ ಈ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದರು ಮತ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಬೇಕಾದ ಅಂಶಗಳನ್ನು ಗುರುತು ಹಾಕಿ ಕೊಟ್ಟಿದ್ದರು ಎಂದು ತಾತಾ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಈ ಹೇಳಿಕೆ ಆಧಾರದ ಮೇಲೆ ಅಶೋಕನನ್ನೂ ಸಹ ವಶಕ್ಕೆ ಪಡೆಯಲಾಗಿದೆ.ಎಂದು ಸಿಸಿಬಿ ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ.
SCROLL FOR NEXT