ಬೆಂಗಳೂರು: ರಾಜಾಕಾಲುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ಮೃತನನ್ನು ಮಡಿವಾಳಪ್ಪ ಗೌಡ (26) ಎಂದು ಗುರುತಿಸಲಾಗಿದ್ದು ಈತ ವಿಜಯಪುರ ಜಿಲ್ಲೆಯವನು ಎನ್ನಲಾಗಿದೆ.ಈತ ಕಳೆದ ಮುರು ದಿನಗಳಿಂದ ಮಡಿವಾಳದಲ್ಲಿ ಕೆಲಸ ಮಾಡುತ್ತಿದ್ದನು. ಮೃತನಿಗೆ ಪತ್ನಿ ಮತ್ತು ಎರಡು ವರ್ಷದ ಮಗನಿದ್ದಾನೆ.
ರಾಜರಾಜೇಶ್ವರಿನಗರದ ಪದ್ಮಾವತಿ ಕಲ್ಯಾಣ ಮಂಟಪದ ಬಳಿ ರಾಜಕಾಲುವೆಗೆ ಒಳಚರಂಡಿ ನೀರು ಸೇರಿದ್ದು .ಇದನ್ನು ಸರಿಪಡಿಸಲುಇ 100 ಮೀಟರ್ವರೆಗೆ ಒಳಚರಂಡಿ ಪೈಪ್ ಅಳವಡಿಸಲು ಬಿಡಬ್ಲ್ಯುಎಸ್ಎಸ್ಬಿ ಛೇಂಬರ್ ಕಾಮಗಾರಿ ನಡೆಸುತ್ತಿತ್ತು. ಳೆದ 1 ತಿಂಗಳಿಂದ 7 ಕಾರ್ವಿುಕರು ಮತ್ತು ಜೆಸಿಬಿ ಕಾಮಗಾರಿ ನಡೆಸುತ್ತಿದ್ದು ರಾಜಾಕಾಲುವೆ ಪಕ್ಕದಲ್ಲೇ ಕಾಮಗಾರಿ ನಡೆಯುತ್ತಿದ್ದ ಕಾರಣ ಮಣ್ಣು ತೇವವಾಗಿದೆ. ಬುಧವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮಣ್ಣು ಏಕಾಏಕಿ ಕುಸಿದು ಮಣ್ಣಿನಡಿ ಸಿಲುಕಿದ್ದ ಇಬ್ಬರು ಕಾರ್ಮಿಕರು ಮೇಲೆ ಬಂದಿದ್ದಾರೆ. ಆದರೆ ಉಳಿದಿದ್ದ ಓರ್ವ ಕಾರ್ಮಿಕ ಮಡಿವಾಳಪ್ಪ ಮೇಲೆ ಬರಲು ಸಾಧ್ಯವಾಗಿಲ್ಲ.
ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ, ಪೋಲೀಸರು ಸ್ಥಳಕ್ಕಾಗಮಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದರಾದರೂ ಆತನ ಜೀವ ಉಳಿಯಲಿಲ್ಲ.
ಮೃತನ ಸಂಬಂಧಿಗಳು ಪ್ರಕರಣದಿಂದ ಆಕ್ರೋಶಗೊಂಡಿದ್ದು ಬಿಡಬ್ಲ್ಯುಎಸ್ಎಸ್ಬಿ ಹಾಗೂ ಗುತ್ತಿಗೆ ದಾರರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಸಂಬಂಧಪಟ್ಟ ಗುತ್ತಿಗೆದಾರರು ಎಲ್ಲಾ ಕಾರ್ಮಿಕರಿಗೆ ಜೀವವಿಮೆ ಮಾಡಿಸಿದ್ದ ಕಾರಣ ಬಿಡಬ್ಲ್ಯುಎಸ್ಎಸ್ಬಿ ಆ ವಿಮಾ ಹಣ ಪಡೆಯಲು ಸಹಾಯ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.