ಬೆಂಗಳೂರು: ಈ ಸುದ್ದಿ ಓದಿದ ನಂತರ ಬೆಂಗಳೂರು ನಗರದ ಮೆಟ್ರೋ ಪ್ರಯಾಣಿಕರು ಕೊಂಚ ರಿಲ್ಯಾಕ್ಸ್ ಆಗಬಹುದು. ಮೆಟ್ರೋ ಪಿಲ್ಲರ್ ದುರಸ್ತಿ ಕಾಮಗಾರಿಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದ್ದು ನಾಳೆ (ಶನಿವಾರ) ಹಾಗೂ ಭಾನುವಾರಗಳಂದು ನಗರದಲ್ಲಿ ಮೆಟ್ರೋ ರೈಲು ಎಂದಿನಂತೆ ಸಂಚರಿಸಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಎಂಜಿ ರಸ್ತೆ ಟ್ರಿನಿಟಿ ವೃತ್ತದ ಸಮೀಪ ಮೆಟ್ರೋ ಸೇತುವೆಯ ವಯಾಡಕ್ಟ್ ನಲ್ಲಿ ಬಿರುಕು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಭಾನುವಾರ ದುರಸ್ತಿ ಕಾರ್ಯ ಕೈಗೊಳ್ಳಲು ಬಿಎಂಆರ್ಸಿಎಲ್ ನಿರ್ಧರಿಸಿತ್ತು. ಇದೇ ಕಾರಣಕ್ಕೆ ನಾಳೆಯಿಂದ ಎರಡು ದಿನ ಮೆಟ್ರೋ ರೈಲು ಸಂಚಾರ ಇರಲ್ಲ ಎನ್ನಲಾಗಿತ್ತು. ಆದರೆ ಈಗನಿಗದಿತ ದುರಸ್ತಿ ಕಾರ್ಯವನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಹೀಗಾಗಿ ಈ ವಾರಾಂತ್ಯ ಮೆಟ್ರೋ ಸಂಚಾರದಲ್ಲಿ ಯಾವ ಬದಲಾವಣೆ ಇರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟ್ರಿನಿಟಿ ನಿಲ್ದಾಣದ ಬಳಿ ಕಾಣಿಸಿಕೊಂಡಿರುವ ಬಿರುಕು ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಈ ಮಾರ್ಗದಲ್ಲಿ ಚಲಿಸುವ ಮೆಟ್ರೋ ರೈಲುಗಳ ವೇಗವನ್ನು ಕಡಿತಗೊಳಿಸಲಾಗಿದೆ.