ಮದ್ದೂರು ಜೆಡಿಎಸ್ ಮುಖಂಡನ ಹತ್ಯೆ:ನಾಲ್ವರು ಆರೋಪಿಗಳ ಬಂಧನ
ಮದ್ದೂರು: ಸೋಮವಾರ ಮದ್ದೂರಿನಲ್ಲಿ ನಡೆದಿದ್ದ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆಗೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಯೋಗೇಶ್, ಸ್ವಾಮಿ, ಶಿವರಾಜ್ ಹಾಗೂ ಹೇಮಂತ್ ಎಂಬುವವರನ್ನು ಪೋಲೀಸರು ಬಂಧಿಸಿದ್ದು ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಿರುವುದಾಗಿ ಮಂಡ್ಯ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಶಿವಪ್ರಕಾಶ್ ದೇವರಾಜ್ ಹೇಳಿದ್ದಾರೆ.
ಪ್ರಕಾಶ್ ಹತ್ಯೆ ಸಂಬಂಧ ಮೃತ ಪ್ರಕಾಶ್ ಕಾರಿನಲ್ಲಿದ್ದ ತೊಪ್ಪನಹಳ್ಳಿಯ ಅಭಿಲಾಷ್ ನೀಡಿದ ದೂರಿನನ್ವಯ ಇಂದು ಬೆಳಿಗ್ಗೆ ಪೋಲೀಸರು ಒಟ್ಟು 8 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು ತೊಪ್ಪನಹಳ್ಳಿ ಹಾಗೂ ಮದ್ದೂರಿನಲ್ಲಿಆರೋಪಿಗಳನ್ನು ಬಂಧಿಸಲಾಗಿದ್ದು ಐಪಿಸಿ ಸೆಕ್ಷನ್ 143(ಅಕ್ರಮ ಕೂಟ), 146(ದೊಂಬಿ), 148(ಮಾರಕಾಸ್ತ್ರಗಳಿಂದ ಹಲ್ಲೆ), 341(ಅಕ್ರಮವಾಗಿ ಬಂಧಿಸುವುದು), 307(ಕೊಲೆ ಯತ್ನ), 302 (ಕೊಲೆಗೆ ದಂಡನೆ), 120ಬಿ(ಕ್ರಿಮಿನಲ್ ಪಿತೂರಿ) ಹಾಗೂ 114(ಅಪರಾಧ ನಡೆದಾಗ ದುಷ್ಪ್ರೇರಕನ ಹಾಜರಿ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸೋಮವಾರ ಸಂಜೆ ಮದ್ದೂರಿನ ಟಿ.ಬಿ.ಸರ್ಕಲ್ ನಲ್ಲಿ ತೊಪ್ಪನಹಳ್ಳಿ ಪ್ರಕಾಶ್ ಎನ್ನುವವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು.ಸ್ಥಳೀಯ ಜೆಡಿಎಸ್ ಮುಖಂಡರಾಗಿದ್ದ ಪ್ರಕಾಶ್ ಹತ್ಯೆಯಿಂದ ಮದ್ದೂರು ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಘಟನೆಯಿಂದ ಸಂತಪ್ತರಾಗಿದ್ದ ಅವರ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಾಂತ್ವನ ಹೇಳಿದ್ದಾರೆ. ಮಂಗಳವಾರ ಪ್ರಕಾಶ್ ಅವರ ಮನೆಗೆ ಭೇಟಿ ನೀಡಿದ್ದ ಕುಮಾರಸ್ವಾಮಿ ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು, ಪ್ರವಾಸೋದ್ಯಮ ಸಚಿವರಾದ ಸಾ.ರಾ. ಮಹೇಶ್ ಸಹ ಈ ಸಮಯದಲ್ಲಿ ಮುಖ್ಯಮಂತ್ತಿಗಳಿಗೆ ಸಾಥ್ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos