ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀ
ಬಾಗಲಕೋಟೆ: ಅಯೋಧ್ಯೆಯಲ್ಲಿ ರಾಮಮಂದಿರ ಈಗಲೇ ನಿರ್ಮಾಣ ಮಾಡಿ, ಮುಂದೆ ಬಹುಮತ ಬಾರದಿದ್ದರೆ ತೊಂದರೆಯಾಗಲಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳೀದ್ದಾರೆ.
ಮೋದಿಯವರು ಕಳೆದ ಚುನಾವಣೆಗೆ ಮುನ್ನ ನಡೆದ ಅನೇಕ ಸಮಾವೇಶಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಈಗ ಸರ್ಕಾರಕ್ಕೆ ಬಹುಮತವಿದೆ, ತಾವು ನೀಡಿದ್ದ ಭರವಸೆಯನ್ನು ಮುಂದಿನ ಚುನಾವಣೆಗೆ ಮುನ್ನ ಈಡೇರಿಸಿ, ಒಂದೊಮ್ಮೆ ಮುಂದಿನ ಚುನಾವಣೆಯಲ್ಲಿ ಬಹುಮತ ಬರದೆ ಹೋದಲ್ಲಿ ಭರವಸೆ ಈಡೇರಿಸಲು ಕಷ್ಟವಾಗಬಹುದು ಎಂದು ಶ್ರೀಗಳು ಹೇಳಿದ್ದಾರೆ.
ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಲು ಕಗ್ಗೋಡಕ್ಕೆ ಆಗಮಿಸಿದ್ದ ಶ್ರೀಗಳು ಬಾಗಲಕೋಟೆಯ;ಲ್ಲಿ ಮಾದ್ಯಮದವರೊಡನೆ ಮಾತನಾಡಿದ್ದಾರೆ.
"ಮೂರು ರಾಜ್ಯಗಳಲ್ಲಿ ಬಿಜೆಪಿ ಸೋತ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾಗುತ್ತಿದೆ. ಹಿಂದಿಗಿಂತ ಈಗ ವಿರೋಧಗಳು ಹೆಚುತ್ತಿದೆ.ಮೋದಿ ಪ್ರಭಾವ ಹಿಂದಿನಂತಿಲ್ಲ ಎನ್ನಲು ಈಚೆಗೆ ನಡೆದ ಪಂಚರಾಜ್ಯ ವಿಧಾನಸಭೆ ಚುನಾವಣೆಯೇ ಸಾಕು. ಮೂರು ರಾಜ್ಯಗಳ ಸೋಲಿನಿಂದ ಜಾಗೃತವಾಗಬೇಕಿದೆ"ಎಂದು ಶ್ರೀಗಳು ಕಿವಿಮಾತು ಹೇಳಿದ್ದಾರೆ.
"ರಾಮಮಂದಿರಕ್ಕಾಗಿ ಐದು ವರ್ಷಗಳಿಂದ ಕಾದಿದ್ದೇವೆ, ಈಗ ಒತ್ತಾಯಿಸುತ್ತೇವೆ. ಸರ್ಕಾರ ಕೂಡಲೇ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು. ವಿವಾದವು ಸುಪ್ರೀಂ ಕೋರ್ಟ್ ನಲ್ಲಿದ್ದರೂ ಸಹ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬಹುದು ಎಂದು ಅನೇಕ ಹಿರಿಯ ಕಾನೂನು ಪಂಡಿತರೇ ಹೇಳಿದ್ದಾರೆ.ಹೀಗಾಗಿ ಜನರ ವಿಶ್ವಾಸ ಉಳಿಸಿಕೊಳ್ಳಲು ಸರ್ಕಾರ ದಿಟ್ಟ ಹೆಜ್ಜೆ ಇರಿಸಬೇಕು." ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲ ಎಂದು ವಿರೋಧ ಪಕ್ಷಗಳು ಹೇಳುತ್ತಿದೆ, ಉಚಿತವಾಗಿ ಏನನ್ನೂ ನೀಡಬಾರದು ಎನ್ನುವುದು ಮೋದಿಯವರ ನಿಲುವು. ಆದರೆ ಈಗ ಕಾಂಗ್ರೆಸ್ಸಿಗರು ಸಾಲಮನ್ನಾ ಮಾಡಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಹ ಸಾಲ ಮನ್ನಾ ಮಾಡಲೇ ಬೇಕು ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಶ್ರೀರಾಮನ ಕುರುತು ಅವಹೇಳನಕಾರಿ ಹೇಳಿಕೆ ನಿಡುವುದು ಸರಿಯಲ್ಲ. ಭಗವಾನ್ ಉಡುಪಿಗೆ ಬಂದು ಕಾಣಲಿ, ಹಿಂದೊಮ್ಮೆ ಸಹ ಬಹಿರಂಗ ಚರ್ಚೆಗೆ ಮೈಸೂರಿನಲ್ಲಿ ಏರ್ಪಾಡು ಮಾಡಲಾಗಿತ್ತಾದರೂ ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಸರ್ಕಾರ ಇದನ್ನು ಆಗಗೊಡಲಿಲ್ಲ. ಈಗ ನಾನು ಅವರೊಬ್ಬರೇ ಉಡುಪಿ ಮಠಕ್ಕೆ ಬಂದು ನನ್ನನ್ನು ಕಾಣಲಿ, ನಾನು ಚರ್ಚೆಗೆ ಸಿದ್ದನಿದ್ದೇನೆ. ಅವರೊಮ್ಮೆ ಬರಲಿಲ್ಲವಾದರೆ ಅವರಿಗೆ ಧೈರ್ಯವಿಲ್ಲ ಎಂದೇ ಭಾವಿಸುತ್ತೇನೆ ಎಂದು ಶ್ರೀಗಳು ನುಡಿದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos