ಬಳ್ಳಾರಿ: ವಾಷಿಂಗ್ಟನ್ ನಲ್ಲಿ ನಡೆಯಲಿರುವ 66ನೇ ವಾರ್ಷಿಕ ರಾಷ್ಟ್ರೀಯ ಪ್ರಾರ್ಥನಾ ಉಪಹಾರಕೂಟದಲ್ಲಿ ಇದೇ 8ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉಪಹಾರದಲ್ಲಿ ಪಾಲ್ಗೊಳ್ಳಲು ತಮಗೆ ಆಹ್ವಾನ ಬಂದಿದೆ ಎಂದು ಸಂಸದ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಆದರೆ ಸಂಸತ್ತಿನ ಬಜೆಟ್ ಅಧಿವೇಶನ ನಡೆಯುತ್ತಿರುವುದರಿಂದ ತಮಗೆ ಅಮೆರಿಕಕ್ಕೆ ಹೋಗಲು ಸಾಧ್ಯವಾಗದಿರಬಹುದು. ಬಿಜೆಪಿ ಮುಖಂಡರು ಅನುಮತಿ ನೀಡಿದರೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ಅಮೆರಿಕಾಕ್ಕೆ ಹೋಗುವುದು ಶ್ರೀರಾಮುಲು ಅವರಿಗೆ ಹೊಸದೇನಲ್ಲ. ಆದರೆ ಅಮೆರಿಕಾ ಅಧ್ಯಕ್ಷರ ಜೊತೆ ಉಪಪಾರ ಕೂಟದಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಆತಿಥ್ಯ ಸಮಿತಿಯಿಂದ ಆಹ್ವಾನ ಬಂದಿರುವುದು ವಿಶೇಷ. ''ಇದೊಂದು ವಿಶೇಷ ಆಹ್ವಾನ, ಭಾರತದಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ನನಗೆ ಮಾತ್ರ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಬಂದಿರುವುದು ಎಂದು ಶ್ರೀರಾಮುಲು ತಿಳಿಸಿದರು.
ಆದರೆ ಶ್ರೀರಾಮುಲುಗೆ ಅಡ್ಡಿಯಾಗಿರುವುದು ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನ. ನನ್ನ ಬಳಿ ವೀಸಾ ಮತ್ತು ಅಗತ್ಯ ದಾಖಲೆಗಳು ಸಿದ್ಧವಾಗಿದೆ. ಆದರೆ ಕಲಾಪದ ವೇಳೆ ಕಡ್ಡಾಯವಾಗಿ ಇರಬೇಕೆಂದು ಪಕ್ಷ ವಿಪ್ ಜಾರಿ ಮಾಡಿರುವುದರಿಂದ ಪಕ್ಷದ ಮುಖಂಡರ ತೀರ್ಮಾನಕ್ಕೆ ಬಿಟ್ಟಿದ್ದೇನೆ.ಅವರು ಇದನ್ನು ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಅಮೆರಿಕಾದ ಶ್ವೇತಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಶ್ವದ ಅನೇಕ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ವಿಶ್ವ ಶಾಂತಿ ಬಗ್ಗೆ ಅಲ್ಲಿ ಮಾತುಕತೆ ನಡೆಯಲಿದೆ. ಅಮೆರಿಕಾ ಅಧ್ಯಕ್ಷರು ನಡೆಸಿಕೊಂಡು ಬಂದಿರುವ ಸಂಪ್ರದಾಯವಿದು ಎನ್ನುತ್ತಾರೆ ಶ್ರೀರಾಮುಲು.
ಕಳೆದ ನವೆಂಬರ್ 5ರಂದು ಶ್ರೀರಾಮುಲು ಅವರಿಗೆ ಈ ಪತ್ರ ಬಂದಿದ್ದು, ಅಮೆರಿಕಾದ ರಾಷ್ಟ್ರೀಯ ಪ್ರಾರ್ಥನಾ ಉಪಹಾರದ ಸಹಾಧ್ಯಕ್ಷರಾದ ಚಾರ್ಲಿ ಕ್ರಿಸ್ಟ್ ಮತ್ತು ರ್ಯಾಂಡಿ ಹುಲ್ಟ್ ಗ್ರೆನ್ ಪತ್ರ ಬರೆದಿದ್ದಾರೆ, ಅದರ ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದೆ. ಇದೊಂದು ನಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತು ವೈಯಕ್ತಿಕ ಸಂಬಂಧವನ್ನು ಬೆಳೆಸಲು ಮತ್ತು ಅಂತಾರಾಷ್ಟ್ರೀಯ ಬಾಂಧವ್ಯವನ್ನು ಇನ್ನಷ್ಟು ಆಳದವರೆಗೆ ವಿಸ್ತರಿಸಲು ಸಹಾಯವಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.