ಬೆಂಗಳೂರು: ಮಹದಾಯಿ ನೀರು ಹಂಚಿಕೆ ಸಂಬಂಧ ನ್ಯಾಯಾಧಿಕರಣ ವಿಚಾರಣೆಯು ಫೆ.8ಕ್ಕೆ ಮುಂದೂಡಲ್ಪಟ್ಟಿದೆ.
ನೀರು ಹಂಚಿಕೆ ವಿವಾದ ಕುರಿತು ಕರ್ನಾಟಕದ ವಿರುದ್ಧ ಗೋವಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಫೆ.13ಕ್ಕೆ ಮಂದೂಡಿದ ನ್ಯಾಯಾಧಿಕರಣ ಉಳಿದ ಪ್ರಕರಣದ ವಿಚಾರಣೆಯನ್ನು ಫೆ.8ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ವಾದ ಮಂಡನೆಗಾಗಿ ಗೋವಾ ಸರ್ಕಾರ ಕಾಲಾವಕಾಶ ಕೇಳದ ಕಾರಣ ವಿಚಾರಣೆ ಮುಂದೂಡಲಾಗಿದ್ದು ಫೆ.22ರ ಒಳಗೆ ವಾದ ಮಂಡನೆ ಸಂಪೂರ್ಣಗೊಳಿಸಬೇಕೆಂದು ಆದೇಶ ನೀಡಿದೆ.
ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ನಡೆಸಬೇಕು. ನ್ಯಾಯಮಂಡಳಿಗೆ ಈ ವಿಚಾರದಲ್ಲಿ ವಿಚಾರಣೆಗೆ ಅವಕಾಶವಿಲ್ಲ ಎಂದು ಕರ್ನಾಟಕ ಹೇಳಿತ್ತು. ಆದರೆ ಗೋವಾ ವಕೀಲರು ನ್ಯಾಯಾಂಗ ನಿಂದನೆ ಅರ್ಜಿಯನ್ನು ಪುನರ್ ಪರಿಶೀಲಿಸುವುದಾಗಿ ಹೇಳಿದ್ದರು. ನ್ಯಾಯಮೂರ್ತಿ ಜೆ.ಎಸ್. ಪಾಂಚಾಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯ ಸಾಧ್ಯಸಾಧ್ಯತೆಗಳ ಬಗ್ಗೆ ಫೆ.13ರೊಳಗೆ ತಿಳಿಸುವುದಾಗಿ ಹೇಳಿದ್ದಾರೆ.