ಬೆಂಗಳೂರು: ಕಳೆದ ಫೆಬ್ರವರಿ 2ರಂದು ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ ತಗುಲಿ ತಾಯಿ ಮಗು ಸಜೀವ ದಹನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಅಧಿಕೃತ ಮಾರುತಿ ಡೀಲರ್ ಕಲ್ಯಾಣಿ ಮೋಟರ್ಸ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ ಇಂಧನ ಸೋರಿಕೆಯಿಂದ ಕಾರಿಗೆ ಬೆಂಕಿ ತಗುಲಿದೆ ಎಂಬ ಮಾಹಿತಿಯನ್ನು ಪೊಲೀಸರು ಸ್ಪಷ್ಟವಾಗಿ ತಳ್ಳಿಹಾಕಿದ್ದು, ತಾಂತ್ರಿಕ ಮತ್ತು ಎಲೆಕ್ಟ್ರಿಕಲ್ ದೋಷದಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಒಂದು ವೇಳೆ ಕಾರಿನಲ್ಲಿ ತಾಂತ್ರಿಕ ದೋಷ ಪತ್ತೆಯಾದರೆ ಕಾರು ಸರ್ವೀಸ್ ಮಾಡಿದ ಸಿಬ್ಬಂದಿಯನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಲ್ಯಾಣಿ ಮೋಟರ್ಸ್ ಮತ್ತು ಮಾರುತಿ ಸಂಸ್ಥೆಯ ಕಾರ್ಮಿಕರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಕಾರಿನ ಸರ್ವೀಸ್ನಲ್ಲಿ ಲೋಪ ಉಂಟಾಗಿದ್ದರಿಂದಲೇ ಬೆಂಕಿ ಕಾಣಿಸಿಕೊಂಡಿರುವುದಾಗಿ ದೂರುದಾರರು ಹೇಳುತ್ತಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕಿದೆ. ಅದು ಕೈ ಸೇರಿದ ಬಳಿಕ ನಿಖರ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 2ರಂದು ವೈಟ್ ಫೀಲ್ಡ್ ಸಮೀಪದ ನಲ್ಲೂರಹಳ್ಳಿಯ ಬೋರ್ವೆಲ್ ರಸ್ತೆಯ ಸುಮಧುರ ಆನಂದಮ್ ಅಪಾರ್ಟ್ಮೆಂಟ್ ನಲ್ಲಿ ರಿಟ್ಜ್ ಕಾರು ಪಾರ್ಕಿಂಗ್ ಮಾಡುವ ವೇಳೆ ಬೆಂಕಿ ತಗುಲಿ ಅಪಾರ್ಟ್ಮೆಂಟ್ ನಿವಾಸಿ ನೇಹಾ ವರ್ಮಾ(30) ಹಾಗೂ ಮಗ ಪರಮ್(4) ಸಜೀವ
ವಾಗಿ ದಹನವಾಗಿದ್ದರು. ಈ ಸಾವಿಗೆ ಕಲ್ಯಾಣಿ ಮೋಟರ್ಸ್ ಶೋರೂಂನವರು ಕಾರಣ ಎಂದು ಆರೋಪಿಸಿ ನೇಹಾ ಅವರ ಅಂಕಲ್ ಮಧುರ್ ವರ್ಮಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos