ರಾಜ್ಯ

ಸರ್ಕಾರಿ ಶಾಲೆಗೆ 1.25 ಕೋಟಿ ರೂ. ಮೌಲ್ಯದ ಕಟ್ಟಡ ಉಡುಗೊರೆ ನೀಡಿದ ಉದ್ಯಮಿ

Nagaraja AB

ಮಂಗಳೂರು: ಬೆಂಗಳೂರು ಮೂಲದ ಉದ್ಯಮಿ ಅಜಿತ್ ಕುಮಾರ್ ರೈ ಮಂಗಳೂರಿನವಿಟ್ಲದಲ್ಲಿನ ಸರ್ಕಾರಿ ಶಾಲೆಗಾಗಿ 1 .20 ಕೋಟಿ ರೂ. ಮೌಲ್ಯದ ಕಟ್ಟಡವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮೂರು ಹಂತದ ಈ ಕಟ್ಟಡ 10 ಕೊಠಡಿಗಳು ಹಾಗೂ ಸಭಾಭವನ ಹೊಂದಿದ್ದು, ಎಲ್ಲಾ ಗ್ರಾನೈಟ್ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ.ಫೆಬ್ರುವರಿ 22 ರಂದು ಉದ್ಘಾಟನೆಯಾಗಲಿದೆ.

ಸುಪ್ರಜಿತ್ ಗ್ರೂಫ್ ಆಪ್ ಇಂಡಸ್ಟ್ರೀಸ್ ನ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಕುಮಾರ್ ಹಾಗೂ ಅವರ ತಂದೆ ದಿವಂಗತ ಡಾ. ಮಂಜುನಾಥ್ ರೈ ಅವರಿಗೂ ಈ ಶಾಲೆಗೂ ಹಳೆಯ ನಂಟು. ಕೆಲ ವರ್ಷಗಳ ಹಿಂದೆ ಶಾಲಾ ಆಡಳಿತ ಮಂಡಳಿ ಶಾಲಾ ಕಟ್ಟಡ ನಿರ್ಮಾಣಕ್ಕೆ ನೆರವು ಕೋರಿದ್ದು,  ಅಜಿತ್ ಕುಮಾರ್ ರೈ ಅವರ ತಂದೆಯ ಸ್ಮರಣಾರ್ಥ ಹೊಸ ಕಟ್ಟಡವನ್ನು ನಿರ್ಮಿಸಿದ್ದಾರೆ.

ಶತಮಾನಗಳ ಇತಿಹಾಸ ಹೊಂದಿರುವ ಈ ಶಾಲೆಯ ಮತ್ತೋರ್ವ ಹಳೆಯ ವಿದ್ಯಾರ್ಥಿಯಾದ ಸುಬ್ರಾಯ ಪೈ ,ಶಾಲೆಯನ್ನು ದತ್ತು ಪಡೆದಿದ್ದು, ದುರಸ್ಥಿಗಾಗಿ ಕಳೆದ ವರ್ಷ 50 ಲಕ್ಷ ರೂಪಾಯಿ ವೆಚ್ಚ ಮಾಡಿದ್ದು, ಅವರೇ ನೇಮಿಸಿರುವ ಆರು ಶಿಕ್ಷಕರಿಗಾಗಿ ಪ್ರತಿತಿಂಗಳು 45 ಸಾವಿರ ಹಣ ಪಾವತಿಸುತ್ತಿದ್ದಾರೆ ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ನಾರಾಯಣ ಗೌಡ ತಿಳಿಸಿದ್ದಾರೆ.

 ಈ ವರ್ಷ ಶಾಲೆಯಲ್ಲಿ 570 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 1 ರಿಂದ 8ನೇ ತರಗತಿಯವರೆಗೂ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ.  ಅನ್ನಪೂರ್ಣ ಟ್ರಸ್ಟ್ ಪ್ರತಿದಿನ ವಿದ್ಯಾರ್ಥಿಗಳಿಗೆ ಉಪಹಾರ ನೀಡುತ್ತಿದೆ ಎಂದು ಅವರು ಹೇಳುತ್ತಾರೆ.

ಇಬ್ಬರು ಉದ್ಯಮಿಗಳು ಭಾರಿ ಪ್ರಮಾಣದ ಹಣವನ್ನು ಶಾಲೆಗೆ ಕಾಣಿಕೆಯಾಗಿ ನೀಡಿದ್ದು, ವ್ಯವಸ್ಥೆಯಲ್ಲಿ ಹೇಗೆ ಬದಲಾವಣೆ ತರಬಹುದು ಎಂಬುದಕ್ಕೆ ಇದೇ ಜ್ವಲಂತ ಉದಾಹರಣೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


SCROLL FOR NEXT