ಬಿಸಿಯೂಟ ನೌಕರರಿಗೆ ಸಿಎಂ ಅಭಯ: 5 ದಿನಗಳ ಅನಿರ್ಧಿಷ್ಟ ಧರಣಿ ಕೊನೆಗೂ ಅಂತ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ನಲ್ಲಿ ಗೌರವ ಧನ ಹೆಚ್ಚಿಸುವ ಹಾಗೂ ಉದ್ಯೋಗ ಭದ್ರತೆ ಕಲ್ಪಿಸುವ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಕಳೆದ ಐದು ದಿನಗಳಿಂದ ಮಳೆ-ಗಾಳಿ ಎನ್ನದೆ ಅಹೋರಾತ್ರಿ ನಡೆಸುತ್ತಿದ್ದ ಧರಣಿಯನ್ನು ರಾಜ್ಯ ಅಕ್ಷರ ದಾಸೋಹ ಬಿಸಿಯೂಟದ ನೌಕರರು ಶುಕ್ರವಾರ ಹಿಂಪಡೆದಿದ್ದಾರೆ.
ಕನಿಷ್ಟ ವೇತನ, ಭವಿಷ್ಯ ನಿಧಿ, ಉದ್ಯೋಗ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಎಐಟಿಯುಸಿ ಹಾಗೂ ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ನೌಕರರು ಕಳೆದ ಐದು ದಿನಗಳಿಂದ ಅನಿರ್ದಿಷ್ಟಾವಧಿ ಧರಣೆ ನಡೆಸುತ್ತಿದ್ದರು.
ಧರಣಿ ಹಿಂಪಡೆಯುವಂತೆ ನೌಕರರ ಮನವೊಲಿಸಲು ಸಚಿವ ತನ್ವೀರ್ ಸೇಠ್ ಹಾಗೂ ಇಲಾಖೆಯ ಅಧಿಕಾರಿಗಳು ಸತತ ಪ್ರಯತ್ನಗಳನ್ನು ನಡೆಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ. ಅಂತಿಕಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರತಿಭಟನಾಕಾರರ ನೇತಾರರೊಂದಿಗೆ ಸಂಧಾನ ಮಾತುಕತೆಗೆ ಮುಂದಾಗಿದ್ದರು.
ತಮ್ಮ ವೇತನವನ್ನು ರೂ.3 ಸಾವಿರಕ್ಕೆ ಹೆಚ್ಚಳ ಮಾಡಬೇಕು ಹಾಗೂ ಉದ್ಯೋಗ ಭದ್ರತೆ ಕಲ್ಪಿಸಬೇಕೆಂಬ ಪ್ರಮುಖ ಬೇಡಿಕೆಗಳನ್ನು ಬಿಸಿಯೂಟ ಕಾರ್ಯಕರ್ತರು ಮಂಡಿಸಿದರು. ಆದರೆ, ಹಾಲಿ ರೂ.2,200ರಿಂದ ರೂ.5 ಸಾವಿರ ವೇತನ ಹೆಚ್ಚಳ ಮಾಡಿದರೆ ಬೊಕ್ಕಸಕ್ಕೆ ಭಾರೀ ಹೊರೆಯಾಗುತ್ತದೆ ಎಂಬುದನ್ನು ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮವಾಗಿ ನೌಕರರ ವೇತನವನ್ನು ರೂ.2,600ಕ್ಕೆ ಹೆಚ್ಚಿಸುವ ಭರವಸೆಯನ್ನು ನೀಡಿದರು ಹಾಗೂ ಅದನ್ನು ಫೆ.16 ರಂದು ಮಂಡನೆ ಮಾಡಲಿರುವ ಬಜೆಟ್ ನಲ್ಲಿ ಪ್ರಕಟಿಸುವುದಾಗಿ ತಿಳಿಸಿದರು ಎಂದು ತಿಳಿದುಬಂದಿದೆ.
ಇದಲ್ಲದೆ ಯೂನಿವರ್ಸಲ್ ಆರೋಗ್ಯ ಯೋಜನೆಗೆ ಬಿಸಿಯೂಟ ಕಾರ್ಯಕರ್ತೆಯರನ್ನೇ ಸೇರಿಸುವುದು, ಉದ್ಯೋಗ ಭದ್ರತೆ ಹಾಗೂ ಭವಿಷ್ಯ ನಿಧಿಯಂತಹ ಸೇವೆಯಂತಹ ಸೌಲಭ್ಯಗಳನ್ನೂ ಬಜೆಟ್ ನಲ್ಲಿ ನೀಡುವ ಭರವಸೆಯನ್ನು ಅವರು ನೀಡಿದ್ದಾರೆಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಯ ನೀಡಿರುವ ಹಿನ್ನಲೆಯಲ್ಲಿ ಇದಕ್ಕೆ ಮಣಿದ ಬಿಸಿಯೂಟ ಕಾರ್ಯಕರ್ತೆಯರು ತಮ್ಮ ಧರಣಿಯನ್ನು ಹಿಂಪದಕ್ಕೆ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos