ದರೋಡೆ ಕೃತ್ಯವನ್ನು ವಿರೋಧಿಸಿದ ವ್ಯಕ್ತಿಗೆ ಚೂರಿ ಇರಿತ, ರಾಜಸ್ಥಾನ ಮೂಲದ ಯುವಕ ಬಲಿ
ಬೆಂಗಳೂರು: ಮೊಬೈಲ್ ಫೋನ್ ಕಳವಿಗೆ ಯತ್ನಿಸಿದ್ದ ವೇಳೆ ಅದನ್ನು ವಿರೋಧಿಸಿದ್ದಕ್ಕಾಗಿ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ದರೋಡೆಕೋರರಿಂದ ಹತ್ಯೆಗೀಡಾಗಿದ್ದಾನೆ.. ಬೆಂಗಳೂರಿನ ಕೆಆರ್ ಮಾರುಕಟ್ಟೆ ಬಳಿ ಬಿವಿಕೆ ಐಯ್ಯಂಗಾರ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಸ್ಥಳದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯಗಳು ದಾಖಲಾಗಿದೆ.
ಭವಾರ್ ರಾಮ್ (23) ಎನ್ನುವ ವ್ಯಕ್ತಿ ಹತ್ಯೆಗೀಡಾದ ದುರ್ದೈವಿಯಾಗಿದ್ದು ಈತ ಸೋಮವಾರ ರಾತ್ರಿ 8.30ಕ್ಕೆ ಬಿವಿಕೆ ಐಯ್ಯಂಗಾರ್ ರಸ್ತೆಯಲ್ಲಿನ ಲಿವಿಂಗ್ ಸ್ಟೈಲ್ ಬಟ್ಟೆ ಅಂಗಡಿಯಿಂದ ಮನೆಗೆ ತೆರಳುತ್ತಿದ್ದ. ಪಂಚಕೇಸರಿ ಜ್ಯುವೆಲ್ಲರ್ಸ್ ಬಳಿ ಬಂದಾಗ ದರೋಡೆಕೋರರ ಗುಂಪು ಭವಾರ್ ನನ್ನು ಅಡ್ಡಗಟ್ಟಿ ಅವನ ಮೊಬೈಲ್ ನ್ನು ಕಿತ್ತುಕೊಳ್ಳಲು ನೋಡಿದೆ. ಆಗ ಭವಾರ್ ದರೋಡೆಕೋರರ ಈ ಕೃತ್ಯವನ್ನು ವಿರೋಧಿಸಿದ್ದಾನೆ. ಆಗ ದುಷ್ಕರ್ಮಿಗಳ ತಂಡ ಅವನನ್ನು ಚಾಕುವಿನಿಂದ ಚುಚ್ಚಿ ಬಲವಾಗಿ ಘಾಸಿ ಮಾಡಿದೆ.
ಆ ಬಳಿಕ ಗುಂಪು ಅಲ್ಲಿಂದ ತಪ್ಪಿಸಿಕೊಂಡಿದ್ದು ಆಘಾತಕ್ಕೊಳಗಾಗಿದ್ದ ಭವಾರ್ ತನ್ನ ಸ್ನೇಹಿತ ಸುರೇಶ್ ಕುಮಾರ್ ಸೇನ್ ಅವರ ಅಂಗಡಿಗೆ ಸುಮಾರು ಒಂದು ಕಿಲೋಮೀಟರುಗಳವರೆಗೆ ಓಡುತ್ತಾ ಬಂದು ಅಲ್ಲಿ ಕುಸಿದು ಬಿದ್ದಿದ್ದನು. ಮತ್ತೆ ಆತ ಚೇತರಿಸಿಕೊಳ್ಳಲಾಗದೆ ಅಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ತೊಡೆಯ ಭಾಗಕ್ಕೆ ಬಲವಾಗಿ ಚಾಕುವಿನಿಂದ ಇರಿಯಲಾಗಿದ್ದ ಕಾರಣ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದರು.
"ಸುಮಾರು 8.45ರ ವೇಳೆಗೆ ಭವರ ನನ್ನ ಅಂಗಡಿಯ ಬಳಿ ಬಂದಿದ್ದ. ನಾನಿನ್ನೂ ಕೆಲಸದಲ್ಲಿದ್ದೆ. ಸಾಯುವ ಮುನ್ನ ಆತ ಯಾವ ಮಾತನ್ನೂ ಆಡಿರಲಿಲ್ಲ. ಸುಮ್ಮನೆ ಅಳುತ್ತಿದ್ದ. ಸುಮಾರು ಐವತ್ತು ಮಂದಿ ಸುತ್ತಲೂ ನೆರೆದರೂ ಯಾರೊಬ್ಬರೂ ಆತನ ಸಹಾಯಕ್ಕೆ ಧಾವಿಸಲಿಲ್ಲ. ನಾನು ಒಂದು ರಿಕ್ಷಾ ತೆಗೆದುಕೊಂಡು ಅವನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದೆ" ಮೃತ ಭವಾರ್ ಮಿತ್ರ ಸುರೇಶ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
"ಭವಾರ್ ಗೆ ಇತ್ತೀಚೆಗಷ್ಟೇ ವಿವಾಹವಾಗಿತ್ತು. ಆತನ ಪತ್ನಿ ಇದೀಗ ಪತಿಯಿಲ್ಲದ ಕಾರಣ ವಿಧವೆಯಾಗಿದ್ದಾಳೆ. ನಾವು ಬಡ ಕುಟುಂಬದಿಂದ ಬಂದಿದ್ದು ನನ್ನ ಸ್ನೇಹಿತನ ಸಾವಿಗೆ ನ್ಯಾಯ ದೊರಕಬೇಕು" ಸುರೇಶ್ ಹೇಳಿದ್ದಾರೆ.
ರಾಜ್ಸ್ಥಾನದ ಜಲೋರ್ ಜಿಲ್ಲೆ ಗಾಂಜಿ ಗ್ರಾಮ ನಿವಾಸಿಯಾದ ಭವಾರ್ ತನ್ನ ವಿವಾಹವಾದ ಬಳಿಕ ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ. ಘಟನೆ ಸಂಬಂಧ ಕೆ ಆರ್ ಮಾರುಕಟ್ಟೆ ಪೋಲೀಸರು ತನಿಖೆ ಕೈಗೊಂಡಿದ್ದು ಸಿಸಿಟಿವಿದೃಶ್ಯಾವಳಿಗಳಿಂದ ಅಪರಾಧಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos