ಬೆಂಗಳೂರು: ಕರ್ನಾಟಕ ಹೈಕೋರ್ಟ್'ಗೆ ನೂತನವಾಗಿ ನೇಮಕಗೊಂಡ ಐದು ಹೊಸ ನ್ಯಾಯಮೂರ್ತಿಗಳು ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ನ್ಯಾಯಾಲಯಕ್ಕೆ ನೂತನವಾಗಿ ನೇಮಕಗೊಂಡ ನ್ಯಾಯಮೂರ್ತಿಗಳಾದ ದೀಕ್ಷಿತ್ ಕೃಷ್ಣ ಶ್ರೀಪಾದ, ಶಂಕರ ಗಣಪತಿ ಪಂಡಿತ್, ರಾಮಕೃಷ್ಣ ದೇವದಾಸ್, ಭೂತನಹೊಸೂರು ಮಲ್ಲಿಕಾರ್ಜುನ ಶ್ಯಾಮಪ್ರಸಾದ್ ಮತ್ತು ಸಿದ್ದಪ್ಪ ಸುನೀಲ್ ದತ್ ಯಾದವ್ ಅವರು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಖಾಲಿಯಿರುವ ನ್ಯಾಯಾಮೂರ್ತಿಗಳ ಹುದ್ದೆ ಶೀಘ್ರದಲ್ಲಿಯೇ ಭರ್ತಿ: ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ
ಕರ್ನಾಟಕ ಹೈಕೋರ್ಟ್ ನಲ್ಲಿ ಖಾಲಿಯಿರುವ ನ್ಯಾಯಮೂರ್ತಿಗಳ ಹುದ್ದೆಗಳ ಭರ್ತಿಗೆ ಶೀಘ್ರವೇ ಕ್ರಮ ಜರುಗಿಸುವುದಾಗಿ ನೂತನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿಯವರು ಬುಧವಾರ ಭರವಸೆ ನೀಡಿದ್ದಾರೆ.
ಬೆಂಗಳೂರು ವಕೀಲರ ಸಂಘವು ಹೈಕೋರ್ಟ್ ವಕೀಲರ ಸಂಭಾಂಗಣದಲ್ಲಿ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿರುವ ಅವರು, ಕರ್ನಾಟಕ ಹೈಕೋರ್ಟ್ ನಲ್ಲಿ ಸಾಕಷ್ಟು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದ್ದು, ಶೇ.60 ರಷ್ಟು ನ್ಯಾಯಮೂರ್ತಿಗಳ ಕೊರತೆಯಿದೆ. ಸದ್ಯ ಐವರು ನೂತನ ನ್ಯಾಯಮೂರ್ತಿಗಳು ನೇಮಕಗೊಂಡಿದ್ದಾರೆ. ಇದರಿಂದ ನ್ಯಾಯಮೂರ್ತಿಗಳ ಕೊರತೆ ಪ್ರಮಾಣ ಶೇ.50ಕ್ಕೆ ಇಳಿದಿದೆ. ಹೀಗಾಗಿ ಖಾಲಿಯಿರುವ ನ್ಯಾಯಾಮೂರ್ತಿಗಳ ಹುದ್ದೆಗಳ ಮತ್ತು ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಜರುಗಿಸಲಾಗುವುದು. ಅಲ್ಲದೆಸ ಎಲ್ಲಾ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.