ಬೆಂಗಳೂರು: ರಾಜ್ಯಾದ್ಯಂತ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ 5,000 ಮಂದಿ ಯುವಕರಿಗೆ ವರ್ಷದಲ್ಲಿ ತರಬೇತಿ ನೀಡಲು ರಾಜ್ಯ ಸರ್ಕಾರ ಸ್ಯಾಪ್ ಸೆ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಯುವ ಯುಗ ಅಭಿಯಾನದಡಿ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮಾಹಿತಿ ತಂತ್ರಜ್ಞಾನ ಆಧಾರಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಮಾಹಿತಿ ತಂತ್ರಜ್ಞಾನ ಮತ್ತು ಬಯೊಟೆಕ್ನಾಲಜಿ ಇಲಾಖೆ ಹಮ್ಮಿಕೊಂಡಿದೆ.
ನಿನ್ನೆ ನಗರದಲ್ಲಿ ನಡೆದ ಬ್ಲಾಕ್ ಚೈನ್ ಸಭೆಯಲ್ಲಿ ಇದನ್ನು ಪ್ರಕಟಿಸಿದ ಐಟಿ, ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ, ಅತ್ಯಾಧುನಿಕ ಕೈಗಾರಿಕಾ ಕೌಶಲ್ಯಗಳನ್ನು ಕಲಿಯಲು ಯುವ ಯುಗ ಕಾರ್ಯಕ್ರಮ ಅತ್ಯುತ್ತಮ ವೇದಿಕೆಯಾಗಿದೆ. ಹೆಚ್ಚು ಔದ್ಯೋಗಿಕ ಪ್ರತಿಭೆಯನ್ನು ಒದಗಿಸಲು ಯುವಜನತೆಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ರಾಜ್ಯಾದ್ಯಂತ ನೀಡಲಾಗುತ್ತದೆ.
ಪದವೀಧರರು ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ಮಾಡಲು ಮತ್ತು ಕಲಿಕೆಯಿಂದ ಹೊರಗುಳಿಯುವ ಯುವಕರಿಗೆ ಕೂಡ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು. ಕರ್ನಾಟಕದ ಯುವಜನತೆ ಕೌಶಲ್ಯಗಳನ್ನು ಬೆಳೆಸಿಕೊಂಡರೆ ಇಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಖಂಡಿತಾ ವೃದ್ಧಿಯಾಗುತ್ತದೆ ಎಂದು ಸಚಿವರು ಹೇಳಿದರು.