ಬೆಂಗಳೂರು: ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಪುತ್ರ ಕೊಲೆ ಯತ್ನ ಪ್ರಕರಣವನ್ನು ಮುಚ್ಚಿ ಹಾಕಲು ಕಬ್ಬನ್ ಪಾರ್ಕ್ ಪೊಲೀಸರು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿರುವುದಕ್ಕೆ ಸಿಸಿಬಿ ಪೊಲೀಸರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಪ್ರಕರಣ ನಡೆದು ಎರಡು ದಿನಗಳಾಗಿವೆ, ನ್ಯಾಯಾಲಯ ಆರೋಪಿಯನ್ನು ಕೇವಲ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ್ದು ಸಮಯಾವಾಕಾಶ ಮುಗಿಯಲಿದೆ, ಹೀಗಾಗಿ ಸಿಸಿಬಿ ಪೊಲೀಸರು ತನಿಖೆ ಆರಂಭಿಸಲು ಸಾಧ್ಯವಾಗುತ್ತಿಲ್ಲ.
ಪ್ರಕರಣದ ತನಿಖೆ ಯಾರು ನಡೆಸುತ್ತಿದ್ದಾರೆ ಎಂಬ ಬಗ್ಗೆ ಪೊಲೀಸರ ವಿರೋಧಾತ್ಮಕ ಹೇಳಿಕೆಗಳು ಗೊಂದಲ ಮೂಡಿಸುತ್ತಿವೆ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ, ಸ್ಥಳೀಯ ಪೊಲೀಸರೇ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ವಹಿಸಿರುವುದಾಗಿ ಅವರೇ ತನಿಖೆ ನಡೆಸುತ್ತಿರುವುದಾಗಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹೇಳಿರುವುದು ಗೊಂದಲು ಮೂಡಿಸಿದೆ.
ಆದರೆ ಸಿಸಿಬಿ ಪೊಲೀಸರು ಪೂರ್ಣವಾಗಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿಲ್ಲ ಎಂದು ಸಿಸಿಬಿ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. ಭಾನುವಾರ ರಾತ್ರಿ ಪ್ರಕರಣವನ್ನು ಒಪ್ಪಿಸಲಾಯಿತು, ಇನ್ಸ್ ಪೆಕ್ಟರ್ ಒಬ್ಬರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ. ಸಿಸಿಬಿ ಪೊಲೀಸರಿಗೆ ಪ್ರಕರಣವನ್ನು ಒಪ್ಪಿಸುವ ಮುನ್ನವೇ ಸ್ಥಳೀಯ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಆರೋಪಿಯನ್ನು ನಾವು ನಮ್ಮ ಕಸ್ಟಡಿಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ, ಏಕೆಂದರೇ ಆರೋಪಿ ಸ್ಥಳೀಯ ಪೊಲೀಸರ ವಶದಲ್ಲಿದ್ದಾನೆ, ಆರೋಪಿಯನ್ನು ವಶಕ್ಕೆ ನೀಡುವಂತೆ ಬುಧವಾರ ನ್ಯಾಯಾಲಯಕ್ಕೆಮನವಿ ಸಲ್ಲಿಸುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ಜಾರೆ. ಆರೋಪಿ ಸದ್ಯ ಕಬ್ಬನ್ ಪಾರ್ಕ್ ಪೊಲೀಸರ ವಶದಲ್ಲಿದ್ದು, ಆರೋಪಿಯನ್ನು ವಿಚಾರಣೆ ಕೂಡ ನಡೆಸಿಲ್ಲ, ಹಾಗೂ ಘಟನೆ ನಡೆದ ಸ್ಥಳವನ್ನು ಕೂಡ ಮಹಜರು ಮಾಡಿಲ್ಲ.
ಏಕ ಕಾಲದಲ್ಲಿ ಒಂದೇ ಪ್ರಕರಣವನ್ನು ಎರಡು ಸಂಸ್ಥೆಗಳು ತನಿಖೆ ಮಾಡಲು ಸಾಧ್ಯವಿಲ್ಲ, ಪ್ರಕರಣವನ್ನು ಕೂಡಲೇ ಸಿಸಿಬಿ ಪೊಲೀಸರಿಗೆ ವರ್ಗಾಯಿಸಬೇಕಿದೆ, ಪ್ರಕರಣದ ಪ್ರಮುಖ ಆರೋಪಿ ಪ್ರಭಾವಶಾಲಿ ವ್ಯಕ್ತಿಯ ಪುತ್ರನಾಗಿದ್ದು. ತನಿಖೆ ನಡೆಸುತ್ತಿರುವ ಪೊಲೀಸ್ ಠಾಣೆ, ಶಾಸಕರ ಕ್ಷೇತ್ರದ ವ್ಯಾಪ್ತಿಯಲ್ಲಿದೆ, ಹೀಗಾಗಿ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಹಿಗಾಗಿ ತನಿಖೆ ನಡೆಸಲು ಸಿಬಿಐ ಸೂಕ್ತವಾಗಿದೆ ಎಂದು ಹಿರಿಯ ವಕೀಲ, ಎಂ.ಟಿ ನಾಣಯ್ಯ ಹೇಳಿದ್ದಾರೆ..
ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ, ಸ್ಥಳೀಯ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಗೆ ಬರುತ್ತವೆ ಎಂದು ಮಾಜಿ ಡಿಜಿ ಮತ್ತು ಐಜಿ ಎಸ್ ಟಿ ರಮೇಶ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಈಶ್ವರಪ್ಪ, ಇಂಥಹ ಘಟನೆಗಳು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ,
ಇದೇ ವಿಷಯಕ್ಕೆಸಂಬಂದಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾ ರೆಡ್ಡಿ,ಮೊಹಮದ್ನನ್ನು ನಗರದಿಂದ ಹೊರ ಹಾಕಲು ಆತ ಏನು ರೌಡಿ ಶೀಟರ್ ಅಲ್ಲ, ಇದೇ ಮೊದಲ ಬಾರಿಗೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಸರಿಯಾದ ಕ್ರಮ ಅನುಸರಿಸಲು ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.