ಬೆಂಗಳೂರು: ದೇಶದ ಜನರಲ್ಲಿ ಹಲವು ಖಾಯಿಲೆಗಳು ಮತ್ತು ಆರೋಗ್ಯ ಸ್ಥಿತಿ ಸುಧಾರಣೆಗಾಗಿ ನಾನಾ ಔಷಧಿಗಳ ಸಂಶೋಧನೆಗೆ ಹೆಚ್ಚಿನ ಅವಕಾಶವಿದೆ. ಆದರೆ ನಮ್ಮಲ್ಲಿ ಇಂತಹಾ ವೈಜ್ಞಾನಿಕ ಅನ್ವೇಷಣೆಯಲ್ಲಿ ತೊಡಗುವ ವೈದ್ಯರ ಕೊರತೆ ಇದೆ ಎಂದು ಭಾರತ ರತ್ನ ವಿಜ್ಞಾನಿ ಸಿಎನ್ಆರ್ ರಾವ್ ಹೇಳಿದ್ದಾರೆ.
ಬೆಂಗಳುರಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾ (ಎಪಿಐಸಿಒಎನ್ 2018) ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. "ನೀವು ವೈದ್ಯರಾಗಿ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು. ವಿಜ್ಞಾನಿಗಳು ಹಾಗೂ ವೈದ್ಯರ ಸಹಯೋಗವು ಉತ್ತಮ ಆವಿಷ್ಕಾರಗಳಿಗೆ ಕಾರಣವಾಗಿದೆ ಎನ್ನುವುದನ್ನು ನಾನು ಸ್ವತಃ ಕಂಡಿದ್ದೇನೆ. ನಾನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ,ವೈದ್ಯರೊಡನೆ ಕೆಲಸ ಮಾಡಿದಾಗ ನನಗೆ ಈ ಅನುಭವವಾಗಿತ್ತು." ಎಂದರು..
ವೈದ್ಯಕೀಯ ಇಂಜಿನಿಯರಿಂಗ್ ಹಾಗೂ ವಿಜ್ಞಾನ ಜೊತೆಯಾದರೆ ಶ್ರೇಷ್ಟ ಅವಿಷ್ಕಾರಗಳು ಸಾಧ್ಯವಾಗಲಿದೆ. ಅಮೆರಿಕಾದಲ್ಲಿ ನೀವು ವೈದ್ಯಕೀಯ ಪದವಿ ಹೊಂದಬೇಕಾದಲ್ಲಿ ನಿಮಗೆ ವಿಜ್ಞಾನದ ಮೂಲಭೂತ ಪದವಿ(ಬಿ.ಎಸ್ಸಿ ನಂತೆ) ಅವಶ್ಯ. ಹಾಗೆ ನಮ್ಮಲ್ಲಿಯೂ ವೈದ್ಯ ಪದವೀಧರರಿಗೆ ವಿಜ್ಞಾನದ ಸಾಕಷ್ಟು ತಿಳುವಳಿಕೆ ಅಗತ್ಯವಿದೆ. ನ್ಯಾನೊತಂತ್ರಜ್ಞಾನದ ವಿಷನ್ ಗ್ರೂಪ್ ನ ಅಧ್ಯಕ್ಷರಾದ ರಾವ್ ಸುಟ್ಟ ಗಾಯದ ಜಾಗದಲ್ಲಿ ಹೊಸ ಚರ್ಮ ಬೆಳೆಯಲು, ಕ್ಯಾನ್ಸರ್, ಅಂಗಾಂಶ ಶಸ್ತ್ರ ಚಿಕಿತ್ಸೆಗಾಗಿ ನ್ಯಾನೋ ತಂತ್ರಜ್ಞಾನದ ಬಳಕೆ. ಮಾಡಬಹುದು ಎನ್ನುವ ಕುರಿತು ಮಾತನಾಡಿದ್ದಾರೆ.
"ಬೆಂಗಳೂರಿನ ನನ್ನ ಪ್ರಯೋಗಾಲಯದಲ್ಲಿ ನ್ಯಾನೋ ತಂತ್ರಜ್ಞಾನದ ಸಂಬಂಧ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದೆ. ಅಮೇರಿಕದಲ್ಲಿ ನ್ಯಾನೊ ತಂತ್ರಜ್ಞಾನವನ್ನು ಬಳಸಿಕೊಂಡು ಸ್ತನ ಕ್ಯಾನ್ಸರ್ ಗೆ ಉತ್ತಮ ಪರಿಹಾರ ಕಂಡುಕೊಂಡಿದ್ದಾರೆ. ಕ್ಯಾನ್ಸರ್ ಪತ್ತೆಹಚ್ಚಲು ನ್ಯಾನೊ ತಂತ್ರಜ್ಞಾನ ಬಳಕೆ ಹೆಚ್ಚು ಉತ್ತಮ ಮಾರ್ಗವಾಗಿದೆ. ಹಾಗೆಯೇ ಯಾವುದೇ ರೀತಿಯಲ್ಲಿ ಬೆಂಕಿಯಲ್ಲಿ ಸುಟ್ಟ ಗಾಯಗಳಾದವರಿಗೆ ಆ ಜಾಗದಲ್ಲಿ ಹೊಸ ಚರ್ಮ ಬೆಳೆಸಲು ಟಿಶ್ಯೂ ಪುನರುತ್ಪಾದನಾ ಇಂಜಿನಿಯರಿಂಗ್ ನ್ನು ಬಳಸಿಕೊಳ್ಳಬಹುದು. ಇನ್ನು ಹಲವು ಖಾಯಿಲೆಗಳಿಗೆ ಯಾವ ಚಿಕಿತ್ಸೆಯೂ ಇರುವುದಿಲ್ಲ. ಆರಂಭಿಕ ಹಂತದ ಆಲ್ಝೈಮರ್ನ ನ್ನು ಪತ್ತೆ ಹಚ್ಚಲು ಆಣ್ವಿಕ ಗುರುತುಗಳನ್ನು ಬಳಸಿಕೊಳ್ಳಬಹುದು.
"ಬಾರತದಲ್ಲಿ ಶಿಕ್ಷಣ ಹಾಗೂ ಆರೋಗ್ಯದ ಬಜೆಟ್ ಗಾತ್ರ ಜಾಗತಿಕವಾಗಿ ಹೋಲಿಸಿದಾಗ ಅತ್ಯಂತ ಕಿರಿದಾಗಿದೆ. ಇದು 2.5% - 3%ರ ನಡುವೆ ಹೊಯ್ದಾಡುತ್ತಿದೆ.. ಶಿಕ್ಷಣ ಮತ್ತು ಆರೋಗ್ಯವು ಉತ್ತಮ ಸಮಾಜದ ಎರಡು ಪ್ರಮುಖ ಅಂಶಗಳಾಗಿವೆ. ಆದರೆ ಭಾರತದಲ್ಲಿ, ನಾವು ಈ ಎರಡು ವಲಯಗಳಿಗೆ ಕನಿಷ್ಠ ಹೂಡಿಕೆಯನ್ನು ಮಾಡುತ್ತಾ ಬಂದಿದ್ದೇವೆ ಜಾಗತಿಕವಾಗಿ ಫಿನ್ ಲ್ಯಾಂಡ್ ಶಿಕ್ಷಣಕ್ಕೆ ಅತ್ಯಂತ ಹೆಚ್ಚು ಬಜೆಟ್ ಹಂಚಿಕೆಯನ್ನು ಮಾಡುವ ರಾಷ್ಟ್ರವಾಗಿದೆ. ಸಿಂಗಾಪುರ ಮೂರನೇ ಸ್ಥಾನ, ಅಮೆರಿಕಾ ಇಪ್ಪತ್ತೈದು ಹಾಗೂ ಭಾರತ ನೂರನೇ ಸ್ಥಾನದಲ್ಲಿದೆ. ವೈದ್ಯಕೀಯ ವ್ತ್ತಿಗೆ ಸಹ ಶಿಕ್ಷಣ ಅತ್ಯಂತ ಮುಖ್ಯವಾಗಿದೆ." ರಾವ್ ಹೇಳಿದ್ದಾರೆ.
’ಡಾನ್ ಆಫ್ ಎ ನ್ಯೂ ಎರಾ ಇನ್ ಮೆಡಿಸಿನ್’ ಎನ್ನುವ ಥೀಮ್ ಹಿನ್ನೆಲೆಯೊಂದಿಗೆ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿಎಪಿಐಸಿಒಎನ್ ಸಮಾವೇಶ ನಡೆಯುತ್ತಿದೆ. ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ ಸೇರಿದಂತೆ ನಾನಾ ದೇಶಗಳ 20 ಅಂತರರಾಷ್ಟ್ರೀಯ ತಜ್ಞರು, 8,000 ವೈದ್ಯರು ಇದರಲ್ಲಿ ಪಾಲ್ಗೊಂಡಿದ್ದಾರೆ.