ಹೊನ್ನಾವರ: ಭಟ್ಕಳ ಹೊನ್ನಾವರ ಶಾಸಕರಾದ ಮಂಕಾಳು ವೈದ್ಯ ಭಾನುವಾರ ರಾತ್ರಿ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾಗ ವ್ಯಕ್ತಿಯೊಬ್ಬ ಕಚ್ಚಾ ಬಾಂಬ್ ಎಸೆದು ಶಾಸಕರನ್ನು ಹತ್ಯೆ ಮಾಡಲು ಪ್ರಯತ್ನಿಸಿರುವ ಘಟನೆ ಹೊನ್ನಾವರದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹೊಸಾಡ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಬಾಂಬ್ ಎಸೆದು ಶಾಸಕರ ಹತ್ಯೆಗೆ ಪ್ರಯತ್ನಿಸಿದ್ದ ವ್ಯಕ್ತಿಯನ್ನು ರೈಮಂಡ್ ಮಿರಂಡ್ ಎಂದು ಗುರುತಿಸಲಾಗಿದೆ. ಹೊಸಾಡ್ ಗ್ರಾಮದಲ್ಲಿ ಏರ್ಪಾಡಾಗಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯ ಉದ್ಘಾಟನೆಗಾಗಿ ಬಂದಿದ್ದ ಶಾಸಕರ ಮೇಲೆ ಈತ ಹತ್ಯೆ ಪ್ರಯತ್ನ ನಡೆಸಿದ್ದಾನೆ.
ಕಚ್ಚಾ ಬಾಂಬ್ ಹಿಡಿದಿದ್ದ ವ್ಯಕ್ತಿ ಕಾರ್ಯಕ್ರಮ ನಡೆಯುತ್ತಿದ್ದಾಗ ಶಾಸಕರತ್ತ ಬಾಂಬ್ ಎಸೆಯಲು ಮುಂದಾಗಿದ್ದಾನೆ. ಆಗ ಆತನ ಕೈಯಲ್ಲಿದ್ದಾಗಲೇ ಬಾಂಬ್ ಸ್ಪೋಟವಾಗಿದೆ. ಪರಿಣಾಮ ವ್ಯಕ್ತಿಯ ಕೈ ಸಂಪೂರ್ಣ ಸುಟ್ಟು ಹೋಗಿದೆ. ತಕ್ಷಣ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆರೊಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಇದೀಗ ರೈಮಂಡ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಂದ ಇತ್ತೀಚೆಗೆ ಜನ ಮೆಚ್ಚುಗೆ ಗಳಿಸಿದ್ದ ಶಾಸಕ ವೈದ್ಯ ಅವರ ಮೇಲೆ ನಡೆದ ಹತ್ಯೆ ಪ್ರಯತ್ನ ಇದಾಗಿದೆ ಎಂದು ಆರೋಪ ಕೇಳಿಬಂದಿದ್ದು ಪೋಲೀಸರ ಪ್ರಕಾರ ಕೃತ್ಯಕ್ಕಾಗಿ ಆರೋಪಿ ಕಚ್ಚಾ ಬಾಂಬ್ ಬಳಸಿದ್ದ.
ಇನ್ನು ಸ್ಥಳೀಯರು ಹೇಳುವ ಪ್ರಕಾರ ವೇದಿಕೆಯಿಂದ 40-50ಮೀಟರ್ ಅಂತರದಲ್ಲಿ ಸ್ಪೋಟ ಸಂಭವಿಸಿದೆ. ಸ್ಫೋಟವು ಪ್ರಬಲವಾದುದಾಗಿತ್ತು. ಇಲ್ಲಿನ ಸ್ಥಳೀಯ ಮೀನುಗಾರರು ಕಚ್ಚಾ ಬಾಂಬ್ ಗಳನ್ನು ಬಳಸುತ್ತಾರೆ. ಅರಬ್ಬಿ ಸಮುದ್ರ ಹಾಗೂ ಶರಾವತಿ ನದಿಯಲ್ಲಿ ಮೀನುಗಾರರು ಮೀನುಗಾರಿಕೆ ನಡೆಸುತ್ತಾರೆ ಎಂದು ಜನರು ಮಾಹಿತಿ ನೀಡಿದ್ದಾರೆ.
ಆರೋಪಿ ರೈಮಂಡ್ ಕೈನಲ್ಲೇ ಬಾಂಬ್ ಸ್ಪೋಟ ಆದ ಕಾರಣ ಶಾಸಕ ಮಂಕಾಳು ವೈದ್ಯ ಅಪಾಯದಿಂದ ಪಾರಾಗಿದ್ದಾರೆ.
ರೈಮಂಡ್ ಏಕೆ ಕಚ್ಚಾ ಬಾಂಬ್ ಹೊತ್ತು ಕಾರ್ಯಕ್ರಮಕ್ಕೆ ಬಂದಿದ್ದ ಎನ್ನುವುದ್ತನಿಖೆಯಿಂದ ತಿಳಿಯಬೇಕಿದೆ ಎಂದಿರುವ ಪೋಲೀಸರು ಘಟನೆ ಸಂಬಂಧ ಹೊನ್ನಾವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಹಿಂದೆ ಬಿಜೆಪಿಯ ಭಟ್ಕಳ ಶಾಸಕ ಡಾ. ಚಿತ್ತರಂಜನ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ಇದಾದ ಬಳಿಕ ಇಂದು ಮತ್ತೆ ಕಾಂಗ್ರೆಸ್ ಶಾಸಕರ ಹತ್ಯೆ ಪ್ರಯತ್ನ ನಡೆದಿದೆ. ಘಟನೆಯ ಕಾರಣವಿನ್ನೂ ನಿಗೂಡವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos