ನವದೆಹಲಿ: ಭಾರತೀಯ ವೈದ್ಯಕೀಯ (ಎಂಸಿಐ) ರದ್ದು ಮಾಡಿ ಅದರ ಬದಲು ರಾಷ್ಟ್ರೀಯ ವೈದ್ಯ ಆಯೋಗ (ಎನ್ಎಂಸಿ) ರಚನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ರಾಷ್ಟ್ರೀಯ ವೈದ್ಯ ಆಯೋಗ ಮಸೂದೆ-2017ನ್ನು ವಿರೋಧಿಸಿ ಮಂಗಳವಾರ ದೇಶಾದ್ಯಂತ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿ ಪ್ರತಿಭಟನೆಗೆ ವೈದ್ಯರು ಕರೆ ನೀಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬಂದ್'ಗೆ ಕರೆ ನೀಡಿದ್ದು, ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಒಟ್ಟು 12 ಗಂಟೆಗಳ ಕಾಲ ಮುಶ್ಕರ ನಡೆಸುವಂತೆ ಕರೆ ನೀಡಿದೆ. ಆದರೆ, ತುರ್ತು ವಿಭಾಗಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿದುಬಂದಿದೆ.
ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ಪ್ರತಿಭಟನೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ. ನಗರದ ಕೆಲ ಆಸ್ಪತ್ರೆಗಳು ಎಂದಿನಂತೆ ತನ್ನ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ರಾಯಚೂರು ಸೇರಿದಂತೆ ಕೆಲವೆಡೆ ಬಂದ್ ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ ಎಂದು ವರದಿಗಳು ತಿಳಿಸಿವೆ.
ಕಳೆದ ಶುಕ್ರವಾರ 'ವೈದ್ಯ ಆಯೋಗ ಮಸೂದೆ' ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಮಂಗಳವಾರ ಚರ್ಚೆಗೆ ಬರುವ ಸಾಧ್ಯತೆಗಳಿವೆ. ವಿಧೇಯಕದ ಅನುಸಾರ ಭ್ರಷ್ಟಾಚಾರದ ಆರೋಪ ಹೊತ್ತಿರುವ ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ) ರದ್ದಾಗಲಿದ್ದು, ಇದರ ಬದಲಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಅಸ್ತಿತ್ವಕ್ಕೆ ಬರಲಿದೆ.
ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕದ ಕಾರ್ಯದರ್ಶಿ ಡಾ.ಬಿ.ವೀರಣ್ಣ ಅವರು ಮಾತನಾಡಿ, ಪ್ರತಿಭಟನೆ ಕುರಿತ ಸಂದೇಶವನ್ನು 177 ಐಎಂಎ ಶಾಖೆಗಳಿಗೆ ರವಾನಿಸಲಾಗಿದೆ. ಕೆಲ ಆಸ್ಪತ್ರೆಗಳು ಬಂದ್'ಗೆ ಬೆಂಬಲ ನೀಡುವುದಾಗಿ ತಿಳಿಸಿವೆ. ಆದರೆ, ಎಷ್ಟು ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಬಂದ್ ಆಗಲಿದೆ ಎಂಬುದರ ಕುರಿತಂತೆ ಖಚಿತ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.
ಪ್ರೈವೇಟ್ ಹಾಸ್ಪಿಟಲ್ಸ್ ಆ್ಯಂಡ್ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಪಿಹಚ್ಎಎನ್ಎ) ಉಪಾಧ್ಯಕ್ಷ ಡಾ.ಮದನ್ ಗಾಯಕ್ವಾಡ್ ಮಾತನಾಡಿ, ಬಂದ್'ಗೆ ಬೆಂಬಲ ನೀಡುವುದು ಆಯಾ ಆಸ್ಪತ್ರೆಗಳಿಗೆ ಸಂಬಂಧಿಸಿದ್ದು ಎಂದು ಹೇಳಿದ್ದಾರೆ.
ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್ ಅವರು ಮಾತನಾಡಿ, ಆಸ್ಪತ್ರೆ ಎಂದಿನಂತೆ ಸೇವೆಯನ್ನು ಮುಂದುವರೆಸಲಿದೆ. ಸಮಿತಿಯನ್ನು ಹೇಗೆ ರಚನೆ ಮಾಡಲಾಗಿದೆ ಎಂಬುದರ ಬಗ್ಗೆ ಚರ್ಚೆ ನಡೆಸಬೇಕಿದೆ. ಆಯೋಗದ ಸದಸ್ಯರನ್ನು ನೇಮಕ ಮಾಡಿರುವುದು ಪಾರದರ್ಶಕವಾಗಿಲ್ಲ. ಅಲೋಪತಿ ಬಗ್ಗೆ ಅಧ್ಯಯನ ನಡೆಸದವರಿಗೆ ಅಲೋಪತಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos