ಮಂಗಳೂರು: ಶವಯಾತ್ರೆಯಾಗದ ಹೊರತು ದೀಪಕ್ ಅಂತ್ಯ ಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕುಟುಂಬಸ್ಥರನ್ನು ಮತ್ತು ಕಾಟಿಪಳ್ಳ ಗ್ರಾಮಸ್ಥರನ್ನು ಮನವೊಲಿಸುವಲ್ಲಿ ಜಿಲ್ಲಾಧಿಕಾರಿಗಳು ಯಶಸ್ವಿಯಾಗಿದ್ದು, ಕುಟುಂಬಸ್ಥರಿಗೆ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿದ್ದ ದೀಪಕ್ ಶವವನ್ನು ಪೊಲೀಸರು ರಹಸ್ಯವಾಗಿ ಕಾಟಿಪಳ್ಳ ಗ್ರಾಮಕ್ಕೆ ರವಾನಿಸಿದ್ದಾರೆ ಎಂದು ಪೊಲೀಸರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದ ಗ್ರಾಮಸ್ಥರನ್ನು ಸಮಾಧಾನಗೊಳಿಸುವಲ್ಲಿ ಕೊನೆಗೂ ಮಂಗಳೂರು ಜಿಲ್ಲಾಡಳಿತ ಯಶಸ್ವಿಯಾಗಿದ್ದು, ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ. ಈ ಪೈಕಿ 5 ಲಕ್ಷ ರು.ಗಳನ್ನು ಜಿಲ್ಲಾಡಳಿತ ನೀಡಲಿದ್ದು, ಉಳಿದ 5 ಲಕ್ಷ ರು.ಗಳನ್ನು ಸಿಎಂ ಪರಿಹಾರ ನಿಧಿಯಿಂದ ಕೊಡಿಸಲಾಗುತ್ತದೆ ಎಂದು ಡಿಸಿ ಸಸಿಕಾಂತ್ ಸೆಂಥಿಲ್ ಭರವಸೆ ನೀಡಿದ್ದಾರೆ.
ಕಾಟಿಪಳ್ಳ ಗ್ರಾಮದಲ್ಲಿ ಇಂದು ಗ್ರಾಮಸ್ಥರೊಂದಿಗೆ ಸಂಧಾನ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ. ಅಂತೆಯೇ ಗ್ರಾಮಸ್ಥರ ಪಟ್ಟಿನ ಮೇರೆಗೆ ದೀಪಕ್ ಅವರ ಶವಯಾತ್ರೆಗೆ ಜಿಲ್ಲಾಡಳಿತ ಅನುಮತಿ ನೀಡಿದ್ದು, ದೀಪಕ್ ನಿವಾಸದಿಂದ ಕಾಟಿಪಳ್ಳ ಗ್ರಾಮದಲ್ಲಿ ಮುಕ್ಕಾಲು ಕಿ.ಮೀ ಎಸಿ ಆ್ಯಂಬುಲೆನ್ಸ್ ನಲ್ಲಿ ಶವಯಾತ್ರೆಗೆ ಅನುಮತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಶವಯಾತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಹೆಚ್ಚುವರಿ ಪಡೆಗಳನ್ನು ಕರೆಸಿಕೊಂಡು ಭದ್ರತೆಗೆ ನಿಯೋಜನೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಇನ್ನು ಸಂಧಾನ ಕಾರ್ಯಕ್ರಮದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಟಿಆರ್ ಸುರೇಶ್ ಕುಮಾರ್ ಅವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos