ಮಂಗಳೂರು: ಮಂಗಳೂರಿನಲ್ಲಿ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಶವಯಾತ್ರೆಗೆ ತಮ್ಮ ಬಳಿ ಯಾರು ಅನುಮತಿ ಕೋರಿಲ್ಲ. ಹಾಗೂ ನಾವು ಕೂಡ ಯಾರಿಗೂ ಶವಯಾತ್ರೆಗೆ ಅನುಮತಿ ನೀಡಿಲ್ಲ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಸಂಬಂಧ ಜಿಲ್ಲೆಯಲ್ಲಿ ಉಂಟಾಗಿರುವ ಪರಿಸ್ಥಿತಿಗೆ ಸಂಬಂಧಿಸಿದಂ.ತೆ ಗುರುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್, ಶವಯಾತ್ರೆಗಾಗಿ ಯಾರೂ ಕೂಡ ತಮ್ಮ ಬಳಿ ಅನುಮತಿ ಕೋರಿಲ್ಲ. ನಾವೂ ಕೂಡ ಅನುಮತಿ ನೀಡಿಲ್ಲ. ಹೀಗಾಗಿ ಶವಯಾತ್ರೆ ನಡೆಸುವ ಮಾತೇ ಇಲ್ಲ. ಇನ್ನು ಪ್ರಸ್ತುತ ಮಂಗಳೂರಿನಲ್ಲಿ ಕೂನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ಬಗ್ಗೆ ರಾಜ್ಯ ಗೃಹ ಸಚಿವರಿಂದ ಸೂಚನೆಗಳು ಬಂದಿದ್ದು, ನಾವು ಅದನ್ನು ಪಾಲಿಸುತ್ತಿದ್ದೇವೆ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಿ; ಪೊಲೀಸರಿಗೆ ಗೃಹ ಸಚಿವರ ಸೂಚನೆ
ಏತನ್ಮಧ್ಯೆ ಮಂಗಳೂರಿನಲ್ಲಿ ಪರಿಸ್ಥಿತಿ ಕೈಮೀರದಂತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ರಾಮಲಿಂಗಾ ರೆಡ್ಡಿ ಅವರು ಎಡಿಜಿಪಿ ಕಮಲ್ ಪಂಥ್ ಅವರೊಂದಿಗೆ ಚರ್ಚೆ ನಡೆಸಿದ್ದು, ಅವರ ನೇತೃತ್ವದಲ್ಲೇ ಭದ್ರತೆಯ ಜವಾಬ್ದಾರಿ ವಹಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕರಾವಳಿ ಪರಿಸ್ಥಿತಿಗೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಸುಮಾರು ಒಂದೂವರೆ ಗಂಟೆ ಸಚಿವರು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಯಾವುದೇ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಂತೆಯೇ ಪ್ರಚೋದನಾಕಾರಿ ಹೇಳಿಕೆ ನೀಡಿದರೆ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ. ಸುರಕ್ಷತೆಗೆ ಕೆಎಸ್ಆರ್ಪಿ ಸೇರಿದಂತೆ ಯಾವುದೇ ಪೊಲೀಸರ ಸಹಾಯವನ್ನು ನೀವು ಪಡೆಯಬಹುದು. ತ್ವರಿತ ನಿರ್ಧಾರಕ್ಕೆ ನಿಮಗೆ ಸ್ವಯಂ ವಿವೇಚನೆ ನಿರ್ಧಾರಕ್ಕೆ ಅವಕಾಶ ನೀಡಲಾಗಿದೆ. ಅಗತ್ಯ ಬಿದ್ದರೆ ಸ್ಥಳದಲ್ಲಿ ಕರ್ಫ್ಯೂ ಕೂಡ ವಿಧಿಸಬಹುದು ಎಂಬ ಅಧಿಕಾರವನ್ನು ಗೃಹ ಸಚಿವರು ಕಮಲ್ ಪಂಥ್ಗೆ ನೀಡಿದ್ದಾರೆ ಎನ್ನಲಾಗಿದೆ.
ಇತ್ತ ಎಜೆ ಆಸ್ಪತ್ರೆ ವ್ಯಾಪ್ತಿಯಲ್ಲೂ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು. ಪೊಲೀಸ್ ಇಲಾಖೆ ನಿನ್ನೆ ರಾತ್ರಿಯಿಂದ ಇಂದು ರಾತ್ರಿಯವರೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ 35ರಡಿ ನಿರ್ಬಂಧಾಜ್ಞೆ ವಿಧಿಸಿ ಆದೇಶ ನೀಡಿದೆ. ಸುರತ್ಕಲ್'ನಲ್ಲಿ 6 ಕೆಎಸ್ಆರ್ಪಿ ಸೇರಿ ಐನೂರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಅಂತೆಯೇ ಸುರತ್ಕಲ್ ವ್ಯಾಪ್ತಿಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos