ರಾಜ್ಯ

ದೀಪಕ್ ರಾವ್ ಶವ ಸ್ವಗ್ರಾಮ ಕಾಟಿಪಳ್ಳಗೆ ರವಾನೆ; ರೂ. 10 ಲಕ್ಷ ಪರಿಹಾರ ಘೋಷಣೆ

Srinivasamurthy VN
ಮಂಗಳೂರು: ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಶವ ಯಾತ್ರೆಗೆ ಹಿಂದೂಪರ ಸಂಘಟನೆಗಳು ಸಿದ್ಧತೆ ನಡೆಸಿಕೊಂಡಿರುವಂತೆಯೇ ಅತ್ತ ಮಂಗಳೂರು ಪೊಲೀಸರು ಮಾತ್ರ ಮೃತ ದೀಪಕ್ ರಾವ್ ಪಾರ್ಥೀವ  ಶರೀರವನ್ನು ರಹಸ್ಯವಾಗಿ ಆ್ಯಂಬುಲೆನ್ಸ್ ಮೂಲಕ ಅವರ ಸ್ವಗ್ರಾಮ ಕಾಟಿಪಳ್ಳಕ್ಕೆ ರವಾನೆ ಮಾಡಿದ್ದಾರೆ ಎನ್ನಲಾಗಿದೆ.
ಮಾಧ್ಯಮಗಳು ವರದಿ ಮಾಡಿರುವಂತೆ ಮಂಗಳೂರಿನ ಎಜೆ ಆಸ್ಪತ್ರೆಯ ಶವಾಗಾರದಿಂದ ಮೃತ ದೀಪಕ್ ರಾವ್ ಮೃತ ದೇಹವನ್ನು ಪೊಲೀಸರು ಆ್ಯಂಬುಲೆನ್ಸ್ ಮೂಲಕ ಸ್ವಗ್ರಾಮ ಕಾಟಿಪಾಳ್ಯಕ್ಕೆ ರವಾನಿಸಿದ್ದು, ಇದು ಬಿಜೆಪಿ  ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಸುರತ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದು, ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು  ಆರೋಪಿಸಿರುವಂತೆ ಎಜೆ ಆಸ್ಪತ್ರೆಯ ಮುಂಭಾಗದಲ್ಲಿ ಸಾಕಷ್ಟು ಮಾಧ್ಯಮ ಸಿಬ್ಬಂದಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿದ್ದರೂ, ಅವರ ಕಣ್ಣುತಪ್ಪಿಸಿ ಮೃ ದೀಪಕ್ ರಾವ್ ಅವರ ಮೃತ ದೇಹವನ್ನು ರಹಸ್ಯವಾಗಿ  ರವಾನೆ ಮಾಡಲಾಗಿದೆ. ಇದು ಸರಿಯಲ್ಲ ಎಂದು ಆರೋಪಿಸಿದ್ದಾರೆ.
ಶವ ಪಡೆಯಲು ಕುಟುಂಬಸ್ಥರ ವಿರೋಧ
ಏತನ್ಮಧ್ಯೆ ಅತ್ತ ಕಾಟಿಪಾಳ್ಳಕ್ಕೆ ಮೃತ ದೀಪಕ್ ರಾವ್ ದೇಹಪಡೆಯಲು ಅವರ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದು, ರಹಸ್ಯವಾಗಿ ಓಮ್ನಿ ಆ್ಯಂಬುಲೆನ್ಸ್ ನಲ್ಲಿ ಮೃತ ದೇಹವನ್ನು ತರುವ ಅನಿವಾರ್ಯತೆ ಏನಿತ್ತು. ದೀಪಕ್  ರಾವ್ ಶವಯಾತ್ರೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೀಪಕ್ ನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ.  ಹೀಗಾಗಿ ದೀಪಕ್ ಶವವನ್ನು ಶವಯಾತ್ರೆ ಮೂಲಕವೇ ಕರೆತರಬೇಕು. ಹೀಗಾಗಿ ಕೂಡಲೇ ಶವವನ್ನು ಆಸ್ಪತ್ರೆಗೆ ವಾಪಸ್  ಕೊಂಡೊಯ್ಯ ಬೇಕು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ವೇಳೆ ಪೊಲೀಸರು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸುತ್ತಿದ್ದು, ಶವಯಾತ್ರೆ ವೇಳೆ ಹಿಂಸಾಚಾರ ನಡೆಯುವ ಸಾಧ್ಯತೆ ಇರುವುದರಿಂದ ಈ ರೀತಿ ತರಲಾಗಿದೆ. ಕಾನೂನು ಸುವ್ಯವಸ್ಥೆ ನಮ್ಮ ಕರ್ತವ್ಯವಾಗಿದ್ದು, ಇದಕ್ಕೆ  ಸಹಕರಿಸಿ ಎಂದು ಪೊಲೀಸರು ಗ್ರಾಮಸ್ಥರ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಜಿಲ್ಲಾಡಳಿತದಿಂದ 5, ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ
ಏತನ್ಮಧ್ಯೆ ಮೃತ ದೀಪಕ್ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ಜಿಲ್ಲಾಡಳಿತದಿಂದ 5, ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ನಿಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸೆಸಿಕಾಂತ್ ಸೆಂಥಿಲ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
SCROLL FOR NEXT