ಬೆಂಗಳೂರು: ವೀರಶೈವ– ಲಿಂಗಾಯತ ಸ್ವತಂತ್ರ ಧರ್ಮ ರಚನೆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಆರು ತಿಂಗಳ ಕಾಲಾವಕಾಶ ನೀದಬೇಕೆಂದು ರಾಜ್ಯ ಅಲ್ಪಸಂಖ್ಯಾತ ಆಯೋಗಕ್ಕೆ ಮನವಿ ಸಲ್ಲಿಸಲು ತಜ್ಞರ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ವೀರಶೈವ– ಲಿಂಗಾಯತ ಸಮ್ದುದಾಯಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವ ಮುಖೇನ ಚುನಾವಣೆ ವೇಳೆ ಲಾಭ ಮಾಡಿಕೊಳ್ಳಲು ಯೋಜಿಸಿದ್ದ ಸಿದ್ದರಾಮಯ್ಯ ಸರ್ಕಾರಕ್ಕೆ ಇದರಿಂದ ಹಿನ್ನಡೆಯಾಗಿದೆ.
ಶನಿವಾರ ವಿಕಾಸಸೌಧದಲ್ಲಿ ನಡೆದ ಸಮಿತಿಯ ಮೊದಲ ಸಭೆ ನಂತರ ಮಾತನಾಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್, "ಸಮಿತಿ ಮುಂದೆ ಬಹು ದೊಡ್ಡ ಜವಾಬ್ದಾರಿ ಇದೆ. ಈ ವಿಚಾರವನ್ನು ಕಾನೂನಾತ್ಮಕವಾಗಿ ಅಧ್ಯಯನ ನಡೆಸಬೇಕು. ಇದಕ್ಕೆ ಹೆಚ್ಚು ಸಮಯ ತಗುಲುವುದರಿಂದ ಕಾಲಾವಕಾಶ ವಿಸ್ತರಣೆಗೆ ಕೋರಲು ತೀರ್ಮಾನಿಸಿದ್ದೇವೆ. ಈ ವಿಚಾರ ಕುರಿತಂತೆ ಯಾವ ಮದ್ಯಂತರ ವರದಿ ಸಲ್ಲಿಸುವುದಿಲ್ಲ." ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿ ಒಟ್ಟು 36 ಅಹವಾಲುಗಳು ಸರ್ಕಾರಕ್ಕೆ ಸಲ್ಲಿಕೆ ಆಗಿವೆ. ಮಠಾಧೀಶರು, ಮತ್ತು ಸಂಘ ಸಂಸ್ಥೆಗಳು ಮತ್ತು ವೈಯಕ್ತಿಕವಾಗಿ ಸಲ್ಲಿಕೆಯಾದ ಅಹವಾಲುಗಳು ಇದರಲ್ಲಿ ಸೇರಿದೆ. ಸಾರ್ವಜನಿಕರು ಅಗತ್ಯ ದಾಖಲೆಗಳೊಡನೆ ಇದೇ 25ರೊಳಗೆ ಅಹವಾಲುಗಳನ್ನು ಸಲ್ಲಿಸಲು ಅವಕಾಶವಿದೆ.ಈ ಎಲ್ಲಾ ಅಹವಾಲನ್ನು ಪರಿಗಣಿಸಿ ಸಮಿತಿ ತನ್ನ ವರದಿ ನೀಡಲಿದೆ ಜನವರಿ 27 ರಂದು ಸಮಿತಿಯ ಮುಂದಿನ ಸಭೆ ನಡೆಯಲಿದೆ ಎಂದು ನಾಗಮೋಹನದಾಸ್ ಹೇಳಿದ್ದಾರೆ.
ಇದೇ ವೇಳೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಹೈಕೋರ್ಟ್ ನಲ್ಲಿ ಸಲ್ಲಿಸಲಾದ ಪಿಐಎಲ್ ಕುರಿತಂತೆ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಒಟ್ಟಾರೆ ಸಮಿತಿಯು ಹೆಚ್ಚಿನ ಕಾಲಾವಕಾಶ ಕೇಳಲು ತೀರ್ಮಾನಿಸಿರುವುದರಿಂದ, ರಾಜ್ಯ ಸರ್ಕಾರದ ಯೋಜನೆಯಂತೆ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ವರದಿ ಸಿಕ್ಕುವ ಸಾಧ್ಯತೆ ಇಲ್ಲ. ಚುನಾವಣೆಗೆ ಮುನ್ನ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡಬೇಕೆನ್ನುವ ಸಿದ್ದರಾಮಯ್ಯ ಅವರ ಯೋಜನೆಗೆ ಇದರಿಂದ ಹಿನ್ನಡೆಯಾಗಿದೆ.