ಬಂದ್ ಹಿನ್ನಲೆಯಲ್ಲಿ ರಸ್ತೆಗಳಲ್ಲಿ ಕಲ್ಲು ತೂರಾಟ ನಡೆಸುತ್ತಿರುವ ಯುವಕರು
ಹುಬ್ಬಳ್ಳಿ: ಪುಣೆಯ ಭೀಮ ಕೋರೆಗಾಂವ್ ಹಿಂಸಾಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿವಿಧ ದಲಿತ ಸಂಘಟನೆಗಳು ಹುಬ್ಬಳ್ಳಿಯಲ್ಲಿ ಸೋಮವಾರ ಬಂದ್'ಗೆ ಕರೆ ನೀಡಿದ್ದಾರೆ.
ದಲಿತ ಸಂಘಟನೆಗಳ ಕರೆ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಬಂದ್ ಆಚರಿಸಲಾಗುತ್ತಿದ್ದು, ಕೆಲವೆಗೆ ಪ್ರತಿಭಟನಾ ನಿರತರು ವಾಹನಗಳನ್ನು ಹಾಗೂ ಬ್ಯಾರಿಕೇಡ್ ಗಳನ್ನು ಧ್ವಂಸಗೊಳಿಸಿದ್ದಾರೆಂದು ವರದಿಗಳು ತಿಳಿಸಿವೆ.
ಬಂದ್ ಕರೆಗೆ ಹುಬ್ಬಳ್ಳಿಯಲ್ಲಿ ಬೆಂಬಲ ವ್ಯಕ್ತವಾಗಿದ್ದು, ರಸ್ತೆಗಳಲ್ಲಿ ಬಸ್ ಹಾಗೂ ಆಟೋ ರಿಕ್ಷಾ ಸಂಚಾರಗಳು ಸಂಪೂರ್ಣವಾಗಿ ಬಂದ್ ಆಗಿದೆ.
ಇಂದು ಬೆಳಿಗ್ಗೆ ಕೆಲವರು ಹಳೇ ಬಸ್ ನಿಲ್ದಾಣದ ಬಳಿ ಬಸ್ ಗಳ ಮೇಲೆ ಕಲ್ಲು ತೂರಾಟವನ್ನು ನೆಡಸಿದ್ದು, ದೇಶಪಾಂಡೆ ನಗರದಲ್ಲಿ ಖಾಸಗಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿರುವುದಾಗಿ ವರದಿಗಳು ತಿಳಿಸಿವೆ. ಇದಲ್ಲದೇ, ರಸ್ತೆಗಳಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಗಳ ಮೇಲೂ ಕಲ್ಲೂ ತೂರಾಟಗಳು ನಡೆದಿದೆ ಎಂದು ಹೇಳಲಾಗುತ್ತಿದೆ. ರಸ್ತೆಗಳಲ್ಲಿ ಹಲವು ಯುವಕರು ಕೈಗಳಲ್ಲಿ ಕಲ್ಲುಗಳನ್ನು ಹಿಡಿದು ದ್ವಿಚಕ್ರ ವಾಹನ ಚಾಲಕರಿಗೆ ಬೆದರಿಕೆಗಳನ್ನು ಹಾಕಿದ್ದಾರೆ. ಪ್ರತಿಭಟನೆ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿದೆ ಎಂದು ತಿಳಿದುಬಂದಿದೆ.
ದಲಿತರು ಏರ್ಪಡಿಸಿದ್ದ ಭೀಮ-ಕೋರೆಗಾಂವ್ ಕದನದ 200ನೇ ವರ್ಷಾಚರಣೆ ವೇಳೆ ಮಹಾರಾಷ್ಟ್ರದ ಪುಣೆಯಲ್ಲಿ ದಲಿತರ ಮೇಲೆ ಮೇಲ್ಜಾತಿಯವರು ಹಲ್ಲೆ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿ ಹಿಂಸಾಚಾರ ಸೃಷ್ಟಿಗೊಂಡು ಯುವಕನೊಬ್ಬ ಮೃತಪಟ್ಟಿದ್ದ.
ಈ ಘಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಮಹಾರಾಷ್ಟ್ರ ರಾಜ್ಯ ಬೀದಿಗಿಳಿದಿದ್ದ ದಲಿತ ಸಮುದಾಯಗಳು ಹಿಂಸಾಚಾರದ ವಿರುದ್ಧ ತೀವ್ರ ಪ್ರತಿಭಟನೆಗಳನ್ನು ನಡೆಸಿದ್ದವು.
ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರಕರಣವನ್ನು ತನಿಖೆಗೆ ಆದೇಶಿಸಿ, ಮೃತಪಟ್ಟ ಯುವಕನ ಕುಟುಂಬಸ್ಥರಿಗೆ ರೂ.10 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು. ಬಳಿಕ ಮಹಾರಾಷ್ಟ್ರದಲ್ಲೂ ದಲಿತ ಹಾಗೂ ವಿವಿಧ ಸಂಘಟನೆಗಳು ಬಂದ್'ಗೆ ಕರೆ ನೀಡಿದ್ದವು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos