ಬೆಂಗಳೂರು: ಅತ್ತೆ-ಮಾವನ ಕಿರುಕುಳ ತಾಳಲಾರದೆ 25 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಐಡಿಯಲ್ ಹೋಮ್ಸ್ ಲೇ ಔಟ್ ನಲ್ಲಿ ಮೊನ್ನೆ ಬುಧವಾರ ರಾತ್ರಿ ನಡೆದಿದೆ.
ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ ಹೆಸರು ಬರೆದಿದ್ದ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯ ಅತ್ತೆ-ಮಾವನನ್ನು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ನಿರ್ಮಲಾ ಎಂದು ಗುರುತಿಸಲಾಗಿದ್ದು ಈಕೆ ಚಿಕ್ಕಮಗಳೂರು ಮೂಲದವರು. ಕಳೆದ ವರ್ಷ ಡಿಸೆಂಬರ್ ನಲ್ಲಿ ಈಕೆ ಸಾಫ್ಟ್ ವೇರ್ ಎಂಜಿನಿಯರ್ ವಿಶ್ವನಾಥ್ ರನ್ನು ಮದುವೆಯಾಗಿದ್ದಳು.
ಮದುವೆಯಾದ ಮೂರು ತಿಂಗಳಲ್ಲಿ ವಿಶ್ವನಾಥ್ ಕೆಲಸದ ನಿಮಿತ್ತ ಜಪಾನ್ ಗೆ ಹೋದರು. ನಿರ್ಮಲಾ ಮಾತ್ರ ಅತ್ತೆ-ಮಾವವ ಜೊತೆ ವಾಸವಾಗಿದ್ದಳು. ಮೊನ್ನೆ ಬುಧವಾರ ಸಂಜೆ 7 ಗಂಟೆ ಹೊತ್ತಿಗೆ ತನ್ನ ಪತಿಗೆ ದೂರವಾಣಿ ಕರೆ ಮಾಡಿದ ನಿರ್ಮಲಾ, ತಮ್ಮ ತಂದೆ ತಾಯಿ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿ ದೂರವಾಣಿ ಕರೆ ಕಡಿತ ಮಾಡಿದ್ದಳು.
ನಂತರ ವಿಶ್ವನಾಥ್ ಪುನಃ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಬಂದಿತ್ತು.
ತಕ್ಷಣವೇ ತನ್ನ ತಂದೆಗೆ ಕರೆ ಮಾಡಿದ ವಿಶ್ವನಾಥ್ ನಿರ್ಮಲಾ ಜೊತೆ ಮಾತನಾಡಿದ್ದನ್ನು ವಿವರಿಸಿದ್ದರು. ಆಗ ವಿಶ್ವನಾಥ್ ತಂದೆ ನಾಗರಾಜ್ ನಿರ್ಮಲಾಳ ರೂಮಿಗೆ ಹೋಗಿ ನೋಡಿದಾಗ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂತು. ನಂತರ ಇವರು ಪೊಲೀಸರಿಗೆ ಮತ್ತು ನಿರ್ಮಲಾ ಪೋಷಕರಿಗೆ ಸುದ್ದಿ ತಿಳಿಸಿದರು.
ಸ್ಥಳವನ್ನು ಪರಿಶೀಲಿಸಿದಾಗ ನಿರ್ಮಲಾ ಬರೆದಿದ್ದ ಪತ್ರವನ್ನು ಹರಿದು ಹಾಕಿರುವುದು ಕಂಡುಬಂತು. ಅದರಲ್ಲಿ ನಾಗರಾಜ್ ಮತ್ತು ಅವರ ಪತ್ನಿ ಕಿರುಕುಳ ನೀಡುತ್ತಿರುವ ಬಗ್ಗೆ ನಿರ್ಮಲಾ ಪ್ರಸ್ತಾಪಿಸಿದ್ದಳು. ಪತ್ರವನ್ನು ಹರಿದು ಕಸದ ಬುಟ್ಟಿಗೆ ಎಸೆದಿದ್ದರು.
ನಿರ್ಮಲಾಳ ತಂದೆ ಪರಮೇಶ್ವರ್ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಮಗಳಿಗೆ ಆಕೆಯ ಅತ್ತೆ-ಮಾವ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos