ಮಂಗಳೂರು: ಮಂಗಳೂರಿನಲ್ಲಿ ಮತ್ತೆ ರೌಡಿಗಳು ಅಟ್ಟಹಾಸ ಮೆರೆದಿದ್ದು, ರೌಡಿ ಚಟುವಟಿಕೆಯಲ್ಲಿ ಕುಖ್ಯಾತಿ ಪಡೆದಿರುವ ಟಾರ್ಗೆಟ್ ಗ್ಯಾಂಗ್ ನ ನಟೋರಿಯಸ್ ರೌಡಿ ಇಲಿಯಾಸ್ ನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.
ಇಂದು ಬೆಳಗ್ಗೆ ಮಂಗಳೂರಿನ ಜಪ್ಪು ಕುಡ್ಪಾಡಿ ಪ್ರದೇಶದಲ್ಲಿರುವ ಫ್ಲಾಟ್ ಗೆ ನುಗ್ಗಿದ್ದ ದುಷ್ಕರ್ಮಿಗಳು ಇಲಿಯಾಸ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ರೌಡಿ ಇಲಿಯಾಸ್ ನ ಎದೆ, ಬೆನ್ನು ಮತ್ತು ಹೊಟ್ಟೆಗೆ ಇರಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಲಿಯಾಸ್ ನನ್ನು ಕೂಡಲೇ ನಗರದ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಇನ್ನು ಇಲಿಯಾಸ್ ತನ್ನ ಮೇಲೆ ದುಷ್ಕರ್ಮಗಿಳು ದಾಳಿ ನಡೆಸುತ್ತಿದ್ದಂತೆಯೇ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು, ಮೂರನೇ ಮಹಡಿಯವರೆಗೂ ಓಡಿ ಹೋಗಿದ್ದಾನೆ. ಈ ವೇಳೆ ಅತನನ್ನು ಹಿಂಬಾಲಿಸಿದ್ದ ದುಷ್ಕರ್ಮಿಗಳು ಪದೇ ಪದೇ ಇರುದ ಘಾಸಿಗೊಳಿಸಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಂತೆಯೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇಲಿಯಾಸ್ ನ ಎದುರಾಳಿ ಗ್ಯಾಂಗ್ ಆದ ಸಫ್ವಾನ್ ಗ್ಯಾಂಗ್ ಈ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತ ಟಿಆರ್ ಸುರೇಶ್ ಅವರು ಭೇಟಿ ನೀಡಿದ್ದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಫಿರಂಗಿಪೇಟೆಯಲ್ಲಿ ನಡೆದಿದ್ದ ಮೂವರ ಹತ್ಯೆ ಪ್ರಕರಣ ಸಂಬಂಧ ಜೈಲು ಸೇರಿದ್ದ ರೌಡಿ ಇಲಿಯಾಸ್ ಕಳೆದ 2 ದಿನಗಳ ಹಿಂದಷ್ಟೇ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ಇಲಿಯಾಸ್ ಈ ಹಿಂದೆ ಉಳ್ಳಾಲ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೂಡ ಆಗಿದ್ದ. ಇಲಿಯಾಸ್ ವಿರುದ್ಧ ಕೊಲೆ, ಕೊಲೆಯತ್ನ, ದರೋಡೆ ಮತ್ತು ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿತ್ತು.
ಇತ್ತೀಚೆಗೆ ಇಲಿಯಾಸ್ ಸಚಿವ ಯು.ಟಿ.ಖಾದರ್ ಅವರೊಂದಿಗಿದ್ದ ಫೋಟೋ ವೈರಲ್ ಆಗಿ ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಸಚಿವ ಖಾದರ್ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆಯನ್ನೂ ನೀಡಿದ್ದರು. ನನಗೂ ಇಲಿಯಾಸ್ಗೂ ಯಾವುದೇ ವ್ಯವಹಾರವಾಗಲಿ ನಂಟಾಗಲಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.