25 ವರ್ಷಗಳ ಬಳಿಕ ನನಸಾದ ಕನಸು: ಹುತಾತ್ಮ ವೀರ ಯೋಧನ ಪುತ್ಥಳಿ ನಿರ್ಮಿಸಿ ಮಾದರಿಯಾದ ಗ್ರಾಮ
ತುಮಕೂರು: ತಮ್ಮೂರಿನ ಹುತಾತ್ಮ ಯೋಧನ ಪುತ್ಥಳಿ ನಿರ್ಮಿಸುವ 25 ವರ್ಷಗಳ ಕನಸ್ಸೊಂದು ಕೊನೆಗೂ ನನಸಾಗಿದ್ದು, ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿಯೇ ಯೋಧನ ಪುತ್ಥಳಿಯನ್ನು ಸ್ಥಾಪಿಸುವ ಮೂಲಕ ಇಲ್ಲಿನ ಗ್ರಾಮವೊಂದು ರಾಜ್ಯಕ್ಕೆ ಮಾದರಿಯಾಗಿದೆ.
1992ರ ಏಪ್ರಿಲ್.3 ರಂದು ಯೋಧ ಬಸವಣ್ಣ ಅವರು ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ವೈರಿಗಳ ವಿರುದ್ಧ ಏಕಾಂಗಿಯಾಗಿ ಹೋರಾಡಿ ಹುತಾತ್ಮರಾಗಿದ್ದರು.
ಇದೀಗ ಈ ವೀರ ಯೋಧನ ಪುತ್ಥಳಿಯನ್ನು ತುರುವೇಕೆರೆ ತಾಲೂಕಿನ ಗೊಟ್ಟಿಕೆರೆ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ಥಾಪನೆ ಮಾಡಲಾಗಿದೆ.
ಹುತಾತ್ಮ ಯೋಧ ಬಸವಣ್ಣ ಅವರ ಸಹೋದರ ರಾಮಕೃಷ್ಣ ಎಂಬುವವರು ಸರ್ಕಾರಿ ಕಾಲೇಜಿನಲ್ಲಿ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಪುತ್ಥಳಿ ನಿರ್ಮಾಣಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಪುತ್ಥಳಿ ನಿರ್ಮಾಣಕ್ಕಾಗಿ ಗೆಳೆಯರು, ಸಂಬಂಧಿಕರಿಂದ ಹಲವು ವರ್ಷಗಳಿಂದ ಹಣವನ್ನು ಸಂಗ್ರಹಿಸಿದ ರಾಮಕೃಷ್ಣ ಅವರು ರೂ.2.45 ಲಕ್ಷ ಹಣವನ್ನು ಸಂಗ್ರಹಿಸಿದ್ದರು. ಇದರಂತೆ ಮೈಸೂರು ಮೂಲಕ ಶಿಲ್ಪಿ ಅರುಣ್ ಎಂಬುವವರಿಂದ 45 ದಿನಗಳ ಕಾಲ ಪುತ್ಥಳಿಯನ್ನು ಕೆತ್ತಿಸಿದ್ದಾರೆ. ಆದರೆ, ಶಾಲಾ ಆವರಣದಲ್ಲಿ ಪುತ್ಥಳಿಯನ್ನು ಸ್ಥಾಪನೆ ಮಾಡಲು ಸರ್ಕಾರ ಅನುಮತಿ ನೀಡಿರಲಿಲ್ಲ. ಹೀಗಾಗಿ ಸಾಕಷ್ಟು ಹೋರಾಟ, ಶ್ರಮದ ಬಳಿಕ ಸರ್ಕಾರ ಅನುಮತಿ ನೀಡಿದ ಹಿನ್ನಲೆಯಲ್ಲಿ ಇದೀಗ ಪುತ್ಥಳಿಯನ್ನು ಶಾಲಾ ಆವರಣದಲ್ಲಿ ಸ್ಥಾಪನೆ ಮಾಡಿದ್ದಾರೆ.
ಬಸವಣ್ಣ ಅವರ ಪುತ್ಥಳಿಗೆ ಆರಂಭಿಕ ದಿನಗಳಲ್ಲಿಯೇ ಗಡಿ ಭದ್ರತಾ ಪಡೆ ಅನುಮತಿ ನೀಡಿತ್ತು. ಭಾರತಿಯ ಸೇನೆಯ ಬಗ್ಗೆ ಮಕ್ಕಳಲ್ಲಿ ಗೌರವ ಮೂಡಿಸಲು ಹಾಗೂ ಪ್ರೇರಿತರಾಗುವ ಸಲುವಾಗಿ ಹುತಾತ್ಮರಾಗಿದ್ದ ಯೋಧ ಚಂದ್ರಶೇಖರ್ ಅವರ ಪುತ್ಥಳಿಯನ್ನು ಕುಣಿಕೆನಹಳ್ಳಿ ಗ್ರಾಮದಲ್ಲಿ ಸ್ಥಾಪನೆ ಮಾಡಲಾಗಿತ್ತು. ಇದರಿಂತ ಪ್ರೇರಿತನಾದ ನಾನು ಕೂಡ ನನ್ನ ಸಹೋದರನ ಪುತ್ಥಳಿ ನಿರ್ಮಿಸಲು ನಿರ್ಧರಿಸಿದ್ದೆ ಎಂದು ರಾಮಕೃಷ್ಣ ಅವರು ಹೇಳಿದ್ದಾರೆ.
ಸಹೋದರ ಬಸವಣ್ಣ ಅವರು ಅವಿವಾಹಿತರಾಗಿದ್ದು, 1988ರ ಅವಧಿಯಲ್ಲಿ ನಾಲ್ಕು ವರ್ಷಗಳ ಕಾಲ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಇವರ ತಂದೆ ಈರಣ್ಣ ಅವರು ವಿಧಿವಶರಾಗಿದ್ದು, ತಾಯಿ ರಂಗಮ್ಮ ಅವರು ಮಗನ ವಿವಾಹ ಮಾಡಲು ಕನಸು ಕಂಡಿದ್ದರು. ಆದರೆ, ಈ ಕನಸು ನನಸಾಗುವುದಕ್ಕೂ ಮುನ್ನವೇ ವೈರಿಗಳ ಗುಂಡಿಗೆ ಎದೆಕೊಟ್ಟು ಬಸವಣ್ಣ ಅವರು ವೀರಮರಣವನ್ನಪ್ಪಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos