ಮೋದಿ ರ್ಯಾಲಿಗೆ ವಿಘ್ನಗಳು ಬಾರದಂತೆ ಹೋಮ ಮಾಡಿಸಿದ ಬಿಜೆಪಿ ನಾಯಕರು
ಬೆಂಗಳೂರು: ಪರಿವರ್ತನಾ ರ್ಯಾಲಿ ವೇಳೆ ಕಂಡು ಬಂದ ಖಾಲಿ ಕುರ್ಚಿಗಳಿಂದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಆವರ ಕೆಂಗಣ್ಣಿಗೆ ಗುರಿಯಾಗಿದ್ದ ರಾಜ್ಯ ಬಿಜೆಪಿ ನಾಯಕರು, ಮತ್ತೆ ಆ ರೀತಿಯ ಪರಿಸ್ಥಿತಿಗಳು ಮರುಕಳುಹಿಸಬಾರದೆಂದು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರ್ಯಾಲಿಗೆ ಯಾವುದೇ ವಿಘ್ನಗಳು ಎದುರಾಗಬಾರದೆಂದು ಶುಕ್ರವಾರ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ರಣಕಹಳೆ ಮೊಳಗಿಸಿದ ಬಿಜೆಪಿ ಪರಿವರ್ತಾನಾ ಯಾತ್ರೆಯ ಸಮಾರೋಪ ಸಮಾರಂಭ ನಡೆಯುವ ಅರಮನೆ ಮೈದಾನದಲ್ಲಿ ಭೂಮಿ ಪೂಜೆ ನೆರವೇರಿಸಿರುವ ಬಿಜೆಪಿ ನಾಯಕರು, ಯಾವುದೇ ನಿರ್ವಿಘ್ನ ಇಲ್ಲದೆ ಸುಗಮವಾಗಿ ನಡೆಯುವಂತೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಫೆ.4 ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಗರಕ್ಕೆ ಆಗಮಿಸುತ್ತಿದ್ದು, ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಯಾವುದೇ ರೀತಿ ಆತಂಕಗಳು ಎದುರಾಗದಂತೆ ವಿಶೇಷ ಪೂಜೆಯ ಜೊತೆಗೆ ಹೋಮ-ಹವನ ಕೂಡ ನಡೆಸಲಾಯಿತು.
ಅರಮನೆ ಮೈದಾನದ ಕೃಷ್ಣ ವಿರಾದಲ್ಲಿ ಕೇಂಜ್ರ ಸಚಿವ ಡಿ.ವಿ. ಸದಾನಂದ ಗೌಡ, ರಾಜ್ಯ ಉಸ್ತುವಾರಿ ಮರುಳೀಧರ್ ರಾವ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಅರವಿಂದ್ ಲಿಂಬಾವಳಿ ಸೇರಿದಂತೆ ಇತರೆ ನಾಯಕರು ವಿಶೇಷ ಪೂಜೆಯಲ್ಲಿ ಭಾಗವಿಸಿದ್ದರು. ಭೂಮಿ ಪೂಜೆ, ಗಣ ಹೋಮ, ವಾಸ್ತು ಹೋಮ-ಹವನ ಸೇರಿ ವಿಶೇಷ ಪೂಜೆಗಳನ್ನು ಸಲ್ಲಿಸುವ ಮೂಲಕ ಸಮಾರಂಭ ಯಶಸ್ವಿಯಾಗಿ ನೆರವೇರಲಿ ಎಂದರು. ಬಿಜೆಪಿಯ ಶಕ್ತಿ ಪ್ರದರ್ಶನವೆಂದೇ ಹೇಳಲಾಗುತ್ತಿದ್ದು, ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos