ರಾಜ್ಯ

ಕರ್ನಾಟಕದ 11 ನದಿಗಳು ಒಳನಾಡು ಜಲಮಾರ್ಗಗಳಾಗಿ ಅಭಿವೃದ್ಧಿ

Nagaraja AB

ಕಾರವಾರ: ಕೇಂದ್ರ ಸರ್ಕಾರ 106 ಹೊಸ ರಾಷ್ಟ್ರೀಯ ಜಲಮಾರ್ಗಗಳನ್ನು ಗುರುತಿಸಿದ್ದು,ರಾಜ್ಯದಲ್ಲಿನ 11 ನದಿಗಳನ್ನು ಒಳನಾಡು ಜಲಮಾರ್ಗಗಳಾಗಿ ಅಭಿವೃದ್ದಿಪಡಿಸಲಾಗುತ್ತಿದೆ.

 ಈ ಸಂಬಂಧ ಟ್ರಾಕ್ಟೆಬಲ್ ಇಂಜಿನಿಯರಿಂಗ್ ಕಂಪನಿ ಒಳನಾಡು ಜಲಮಾರ್ಗ ಪ್ರಾಧಿಕಾರಕ್ಕೆ ಇತ್ತೀಚಿಗೆ ಸಲ್ಲಿಸಿದ್ದ ವರದಿಗೆ ಕೇಂದ್ರಸರ್ಕಾರ ಅನುಮೋದನೆ ನೀಡಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ಭೀಮಾ, ಘಟ್ಟಪ್ರಭಾ, ಗುರುಪುರ, ಕಬಿನಿ, ಕಾಳಿ, ಶರಾವತಿ, ಮಲಪ್ರಭಾ, ನೇತ್ರಾವತಿ , ಪಂಚಗಂಗೊಳ್ಳಿ, ತುಂಗಭದ್ರಾ, ಉದಯವರ ಜಲಮಾರ್ಗಗಳಾಗಿ ಅಭಿವೃದ್ಧಿಗೊಳ್ಳಿದ್ದು, ಸರಕುಗಳು ಮತ್ತು ಜನರನ್ನು  ತ್ವರಿತವಾಗಿ ಸಾಗಿಸಲು ನೆರವಾಗಲಿದೆ.

54 ಕಿಲೋ ಮೀಟರ್ ಉದ್ದದ ಕಾಳಿ ನದಿ ಹಾಗೂ 29 ಕಿಲೋಮೀಟರ್ ಉದ್ದದ ಶರಾವತಿ ನದಿಗಳನ್ನು ಒಳನಾಡು ಜಲಮಾರ್ಗಗಳನ್ನಾಗಿ ಅಭಿವೃದ್ದಿಪಡಿಸುವ ಯೋಜನಾ ವರದಿ ಸಿದ್ಧವಾಗಿದೆ. ಕಾಳಿ, ಶರಾವತಿ, ನೇತ್ರಾವತಿ, ನದಿಗಳ ಅಭಿವೃದ್ಧಿಯಿಂದಾಗಿ ಉತ್ತರ ಕನ್ನಡ ಜಿಲ್ಲೆ ಹಾಗೂ ಪೂರ್ವ ಘಟ್ಟದ ಅನೇಕ ಹಳ್ಳಿಗಳು ಪಟ್ಟಣಗಳೊಂದಿಗೆ  ಸಂಪರ್ಕ ಕಲ್ಪಿಸಬಹುದಾಗಿದೆ.

ಈ ಯೋಜನೆಗೆ  ಒಳನಾಡು ಜಲಮಾರ್ಗ ಅಭಿವೃದ್ಧಿ ಪ್ರಾಧಿಕಾರ ಅನುಮೋದನೆ ದೊರೆತರೆ ಒಂದು ವರ್ಷದೊಳಗೆ ಟೆಂಡರ್ ಪ್ರಕ್ರಿಯೆ ಕರೆಯಲಾಗುತ್ತದೆ.
 
ನದಿಗಳು, ಡ್ಯಾಮ್ ಮತ್ತು ದೊಡ್ಡ ದೊಡ್ಡ ಕೆರಗಳನ್ನು  ಒಳನಾಡು ಜಲಮಾರ್ಗಗಳನ್ನಾಗಿ ಬಳಸಿಕೊಳ್ಳಲು ಕೇಂದ್ರಸರ್ಕಾರ ಚಿಂತನೆ ನಡೆಸಿದ್ದು, ಕರ್ನಾಟಕದ 11 ನದಿಗಳ ಅಭಿವೃದ್ಧಿಯಿಂದಾಗಿ ರಾಜ್ಯ ಮಾತ್ರವಲ್ಲದೇ, ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸಲು ಅನುಕೂಲವಾಗಲಿದೆ.

ಈ ಯೋಜನೆ ಅನುಮೋದನೆಗೊಂಡರೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯಲಿದೆ ಎಂದು ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಎನ್. ರಮೇಶ್ ತಿಳಿಸಿದ್ದಾರೆ.

SCROLL FOR NEXT