ಬೆಂಗಳೂರು: ನೋಟು ನಿಷೇಧಗೊಂಡ ಬಳಿಕ ಕೋಟ್ಯಾಂತರ ರುಪಾಯಿಗಳನ್ನು ಕಾಂಗ್ರೆಸ್ ನಾಯಕರು ಕಾನೂನುಬಾಹಿರವಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆಂದು ಬಿಜೆಪಿಯ ಬೆಂಗಳೂರು ನಗರ ವಕ್ತಾರ ಎನ್.ಆರ್.ರಮೇಶ್ ಅವರು ಶನಿವಾರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿ ಮಾತನಾಡಿರುವ ಅವರು, ನೋಟು ನಿಷೇಧಗೊಂಡ ಬಳಿಕ ರೂ.410 ಕೋಟಿ ಹಳೆ ನೋಟುಗಳನ್ನು ಕಾಂಗ್ರೆಸ್ ನಾಯಕರು ಪರಿವರ್ತನೆ ಮಾಡಿಕೊಂಡಿದ್ದಾರೆಂದು ಹೇಳಿದ್ದಾರೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್ ಹಾಗೂ ಭೈರತಿ ಬಸವರಾಜ್ ವಿರುದ್ಧ ಸಿಬಿಐ, ಜಾರಿ ನಿರ್ದೇಶನಾಲಯ, ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಲೋಕಾಯುಕ್ತ ಸಂಸ್ಥಗೆ ದೂರು ನೀಡಿದ್ದಾರೆ.
ಬೆಂಗಳೂರು ಒನ್ ಕೇಂದ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್ ಹಾಗೂ ಭೈರತಿ ಬಸವರಾಜ್ ಅವರು ರೂ.410 ಕೋಟಿ ಹಳೆ ನೋಟುಗಳನ್ನು ಪರಿವರ್ತನೆ ಮಾಡಿಕೊಂಡಿದ್ದಾರೆಂದು ಹೇಳಿರುವ ರಮೇಶ್ ಅವರು ಇದಕ್ಕೆ ಸಂಬಂಧಿಸಿದ 235 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
2016ರ ನ.8 ರಂದು ನೋಟು ಅಮಾನ್ಯೀಕರಣ ಬಳಿಕ ತಮ್ಮಲ್ಲಿ ಇದ್ದ ನೂರಾರು ಕೋಟಿ ಹಳೇ ನೋಟುಗಳನ್ನು ಕಾನೂನು ಬಾಹಿರವಾಗಿ ಬದಲಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿಚ್ಚರಾಮಯ್ಯ, ಕೆ.ಜೆ.ಜಾರ್ಜ್, ಭೈರತಿ ಬಸವರಾಜ್ ಸೇರಿದಂತೆ ಇತರರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಸಿಬಿಐ, ಜಾರಿ ನಿರ್ದೇಶನಾಲಯ, ಭ್ರಷ್ಟಾಚಾರ ನಿಗ್ರಹ ದಳ, ಲೋಕಾಯುಕ್ತ ಸಂಸ್ಥೆಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಒನ್ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಸಿಎಂಎಸ್ ಕಂಪ್ಯೂಟರ್ ಲಿ.ಸಂಸ್ಥೆಯ ಮುಖ್ಯಸ್ಥರು ಭ್ರಷ್ಟರೊಂದಿಗೆ ಶಾಮೀಲಾಗಿ ನೋಟು ಬದಲಿಸುವ ಕಾರ್ಯ ಮಾಡಿಕೊಟ್ಟಿದ್ದಾರೆ. 2016ರ ನ.9 ರಿಂದ 2017ರ ಮಾ.31ರ 141 ದಿನದಲ್ಲಿ ರೂ.500 ಮತ್ತು ರೂ.1 ಸಾವಿರ ಮುಖಬೆಲೆಯ ನೋಟುಗಳ ಬದಲಿಗೆ ರೂ.410 ಕೋಟಿಗಿಂತಲೂ ಹೆಚ್ಚು ಮೊತ್ತದಷ್ಟು ಹಣವನ್ನು ರೂ.500 ಮತ್ತು ರೂ.100 ನೋಟುಗಳಾಗಿ ಬದಲಾವಣೆ ಮಾಡಲಾಗಿದೆ.
ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್'ಬಿ, ಬೆಸ್ಕಾಂ, ಬಿಎಸ್ಎನ್ಎಲ್, ಬಿಡಿಎ, ಕಂದಾಯ ಇಲಾಖೆ, ದೂರ ಸಂಪರ್ಕ ಸೇವಾ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಯ ಬಿಲ್ಲುಗಳ ಪಾವತಿ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಡೆಯುತ್ತವೆ. ಪ್ರತಿನಿತ್ಯ ಕೋಟ್ಯಾಂತರ ಹಣ ಸಂಗ್ರಹವಾಗಲಿದ್ದು, ಈ ಪೈಕಿ ಶೇ.80ರಷ್ಟು ರಣ ನಗದು ರೂಪದಲ್ಲಿ ಸಂಗ್ರವಾಗುತ್ತವೆ. ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 93 ಬೆಂಗಳೂರು ಒನ್ ಕೇಂದ್ರಗಳಲ್ಲಿ ಹಣವನ್ನು ಪರಿವರ್ತನೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.