ಚಿಕ್ಕಬಳ್ಳಾಪುರ: ಕೆಎಸ್'ಆರ್'ಟಿಸಿ ಬಸ್ ನಲ್ಲಿ ಪ್ರಯಾಣಿಸುವವರು ತಮ್ಮ ಜೊತೆ ಸಾಕು ಪ್ರಾಣಿಗಳನ್ನೋ, ಪಕ್ಷಿಗಳನ್ನೋ ಕರೆದೊಯ್ಯಬೇಕಾದರೆ ಟಿಕೆಟ್ ಪಡೆಯಲೇಬೇಕೆಂಬುದು ಸಂಸ್ಥೆ ನಿಯಮವಾಗಿದೆ. ಆದರೆ, ಇದನ್ನು ಅರಿಯದ ವ್ಯಕ್ತಿಯೊಬ್ಬರು ಎರಡು ಕೋಳಿಗಳೊಂದಿಗೆ ಪ್ರಯಾಣಿಸಿರುವ ಘಟನೆ ಗೌರಿ ಬಿದನೂರಿನಲ್ಲಿ ಭಾನುವಾರ ನಡೆದಿದೆ.
ನಿಯಮ ಪ್ರಕಾರ ಕೋಳಿಗೂ ಟಿಕೆಟ್ ವಿಧಿಸಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಾಕ ಚರ್ಚೆಗೆ ಕಾರಣವಾಗಿದೆ.
ಗೌರಿ ಬಿದನೂರು ತಾಲೂಕಿನ ಪೆದ್ದೇನಹಳ್ಳಿಯ ಶ್ರೀನಿವಾಸ್ ಎಂಬುವವರು ಭಾನುವಾರ ಸಂತೆಯಲ್ಲಿ 2 ನಾಟಿ ಕೋಳಿ ಖರೀದಿಸಿ ಕೆಎಸ್ಆರ್'ಟಿಸಿ ಬಸ್ ಹತ್ತಿದ್ದಾರೆ. ಈ ವೇಳೆ ಕಂಡಕ್ಟರ್ ಬಂದು ಕೋಳಿಗಳಿಗೂ ಅರ್ಧ ಟಿಕೆಟ್ ಖರೀದಿಸಲೇಬೇಕು ಎಂದು ಎಚ್ಚರಿಸಿದ್ದಾರೆ.
ಕುರಿ, ನಾಯಿಗಳಾದರೆ, ಪ್ರಯಾಣಿಕರ ಜಾಗ ಆಕ್ರಮಿಸಿಕೊಳ್ಳುವ ಕಾರಣ ಟಿಕೆಟ್ ನೀಡುವುದರಲ್ಲಿ ತಪ್ಪಿಲ್ಲ, ಆದರೆ, ಕೋಳಿಗೂ ಟಿಕೆ್ ನೀಡುವುದು ಯಾವ ಕಾನೂನು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕಂಡಕ್ಟರ್ ನಿಯಮ ಇರುವುದು ಹೀಗೆ ಎಂದು ಖಡಕ್ ಆಗಿ ಹೇಳಿದ ಬಹಳಿಕ ಅನಿವಾರ್ಯವಾಗಿ ಟಿಕೆಟ್'ಗಳನ್ನು ಪಡೆದಿದ್ದಾರೆ.