ಮೈಸೂರು; ವೇತನ ಹೆಚ್ಚಳ ಆಗ್ರಹಿಸಿ ಪ್ರತಿಭಟನೆ ನಡೆಸಲು ಚಾಮುಂಡಿ ಬೆಟ್ಟದ ಪುರೋಹಿತರು ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.
ಕಳೆದ ಹತ್ತು ವರ್ಷಗಳಿಂದ ವೇತನ ಹೆಚ್ಚಳ ಮಾಡದಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಪುರೋಹಿತರು ಆಷಾಡ ತಿಂಗಳು ಮತ್ತು ಚಾಮುಂಡೇಶ್ವರಿ ಜಯಂತಿಯ ದಿನದಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ವೇತನ ಹೆಚ್ಚಳ ಮಾಡುವಂತೆ ಹಲವು ವರ್ಷಗಳಿಂದರೂ ಜಿಲ್ಲಾ ಉಪ ಆಯುಕ್ತರು ಹಾಗೂ ಮುಜರಾಯಿ ಇಲಾಖೆ ಬಳಿ ಮನವಿ ಮಾಡಿಕೊಳ್ಳುತ್ತಲೇ ಇದ್ದೇವೆ. ಆದರೆ, ನಮ್ಮ ಮನವಿಗಳನ್ನು ಅಧಿಕಾರಿಗಳು ತಿರಸ್ಕರಿಸುತ್ತಲೇ ಬಂದಿದ್ದಾರೆ. ಹೀಗಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆಂದು ಶ್ರೀ ಚಾಮುಂಡೇಶ್ವರಿ ದೇಗುಲ ನೌಕರರ ಸಂಘಟನೆ ಸದಸ್ಯರು ತಿಳಿಸಿದ್ದಾರೆ.
ಶ್ರೀ ಚಾಮುಂಡೇಶ್ವರಿ ದೇಗುಲ ನೌಕರರ ಸಂಘಟನೆ ಅಧ್ಯಕ್ಷ ಕೆ. ಶ್ರೀನಿವಾಸ್ ಅವರು ಮಾತನಾಡಿ, 5ನೇ ವೇತನ ಆಯೋಗದ ಅಡಿಯಲ್ಲಿ 160 ನೌಕರರ ಪೈಕಿ ಕೇವಲ 80 ಮಂದಿಗೆ ಮಾತ್ರ ವೇತನವನ್ನು ನೀಡಲಾಗುತ್ತಿದೆ. ಹಬ್ಬಗಳ ದಿನದಂದು, ಸಾರ್ವತ್ರಿಕ ರಜೆ ದಿನದಂದೂ ಕೂಡ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 8 ಗಂಟೆಗಳಿಗೂ ಅಧಿಕ ಕಾಲ ಕಾರ್ಯನಿರ್ವಹಿಸುತ್ತಾರೆ. 2017-18 ಸಾಲಿನಲ್ಲಿ ದೇಗುಲದ ವಾರ್ಷಿಕವಾಗಿ ರೂ.29.87 ಕೋಟಿ ಬಂದಿದೆ. 160 ನೌಕರರಿಗೂ ಆಯೋಗದ ಅನ್ವಯ ವೇತನವನ್ನು ನೀಡಿದರು, ದೇಗುಲದ ಆದಾಯದ ಮೇಲೆ ಶೇ.35 ರಷ್ಟೂ ಕೂಡ ಪರಿಣಾಮ ಬೀರುವುದಿಲ್ಲ. ವೇತನ ನೀಡುವುದರಲ್ಲಿಯೂ ವಿಳಂಬ ನೀತಿ ಅನುಸರಿಸಲಾಗುತ್ತಿದ್ದು, ಇದು ಸಂಕಷ್ಟದಲ್ಲಿ ಜೀವನ ನಡೆಸುವಂತ ಪರಿಸ್ಥಿತಿಗಳನ್ನು ಎದುರಾಗಿಸಿದೆ ಎಂದು ಹೇಳಿದ್ದಾರೆ.