ಬಾಗಲಕೋಟೆ: ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಅವರ ಪುತ್ರನ ಗೂಂಡಾಗಿರಿ ಪ್ರಕರಣ ಮಾಸುವ ಮುನ್ನವೇ ಬಿಜೆಪಿ ಹಿರಿಯ ಶಾಸಕರೊಬ್ಬರ ಪುತ್ರ ಕರ್ತವ್ಯನಿರತ ಪೊಲೀಸ್ ಪೇದೆಯೊಬ್ಬರಿಗೆ ಅವಾಚ್ಯ ಪದಗಳಿಂದ ನಿಂದಿಸಿ ದರ್ಪ ತೋರಿರುವ ಘಟನೆ ಬೆಳಕಿಗೆ ಬಂದಿದೆ.
ನಿನ್ನೆ ತಡರಾತ್ರಿ ಬಾಗಲಕೋಟೆ ಜಿಲ್ಲೆ ಮುಧೋಳ ಕ್ಷೇತ್ರದ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರ ಪುತ್ರ ಅರುಣ್ ಕಾರಜೋಳ ಅವರು ಪೊಲೀಸ್ ಪೇದೆ ಮಲ್ಲೇಶ್ ಲಮಾಣಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಶಾಸಕರ ಪುತ್ರನ ವಿರುದ್ಧ ಬಾಗಲಕೋಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಶಾಸಕರ ಮಗ ಎಲ್ಲೆ ಮೀರಿ ಪೊಲೀಸ್ ಪೇದೆ ವಿರುದ್ಧ ಫೋನ್ ನಲ್ಲಿ ನಾಲಿಗೆ ಹರಿಬಿಟ್ಟಿರೋ ಆಡಿಯೋ ಇದೀಗ ವೈರಲ್ ಆಗಿದೆ.
ಭಾನುವಾರ ರಾತ್ರಿ ಅರುಣ್ ಕಾರಜೋಳ ಬೆಂಬಲಿಗರು ನೋ ಪಾರ್ಕಿಂಗ್ ನಲ್ಲಿ ಕಾರನ್ನು ನಿಲ್ಲಿಸಿರ್ತಾರೆ. ಆಗ ಅರುಣ್ ಕಾರಜೋಳ ಬೆಂಬಲಿಗರು ಪೇದೆ ಮಲ್ಲೇಶ ಜೊತೆ ಪಾಕಿ೯ಂಗ್ ವಿಚಾರವಾಗಿ ಜಗಳ ಮಾಡಿದ್ದಾರೆ. ಆದರೆ ಯಾವುದೇ ರೀತಿಯಿಂದಲೂ ನಿಯಮ ಉಲ್ಲಂಘಿಸುವಂತಿಲ್ಲ ಎಂದು ಪೇದೆ ಮಲ್ಲೇಶ್ ಪಟ್ಟು ಹಿಡಿದಾಗ ಆಕ್ರೋಶಗೊಂಡ ಬೆಂಬಲಿಗರು ಅರುಣ್ ಕಾರಜೋಳ ಗೆ ಪೇದೆ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಅರುಣ್ ಕಾರಜೋಳ, ಪೇದೆ ಮಲ್ಲೇಶಗೆ ಪೋನ್ ಮಾಡಿ ಅವಾಚ್ಯ ಪದಗಳಿಂದ ನಿಂದನೆ ಮಾಡಿ ಬೈದಿದ್ದಾರೆ.
ಘಟನೆಯ ನಂತರ ಪೇದೆ ಮಲ್ಲೇಶ್, ಮುಧೋಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಗ ಪೊಲೀಸರು ಅರುಣ್ ಕಾರಜೋಳ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಬಳಿಕ ಶಾಸಕರ ಮಗನ ವಿರುದ್ದ ಕರ್ತವ್ಯ ಕ್ಕೆ ಅಡ್ಡಿಪಡಿಸಿ, ನಿಂದಿಸಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos