ರಾಜ್ಯ

ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ಸರ್ಕಾರಕ್ಕೆ ಪಾವತಿಯಾಗಬೇಕಿರುವ ತೆರಿಗೆ 6 ಸಾವಿರ ಕೋಟಿಗೂ ಅಧಿಕ!

Sumana Upadhyaya

ಬೆಂಗಳೂರು: ಒಂದೆಡೆ ಬೃಹತ್ ಗಾತ್ರದ ರೈತರ ಕೃಷಿ ಸಾಲಮನ್ನಾ ರಾಜ್ಯ ಸರ್ಕಾರದ ಮೇಲೆ ಹೊರೆಯಾಗಿದ್ದರೆ ಇನ್ನೊಂದೆಡೆ ಸ್ಥಳೀಯ ಸಂಸ್ಥೆಗಳಿಂದ ಸರ್ಕಾರಕ್ಕೆ ಬರಬೇಕಾಗಿರುವ ತೆರಿಗೆ ಬಾಕಿ 6 ಸಾವಿರ ಕೋಟಿ ರೂಪಾಯಿಗಳಿವೆ.

ಈ ಆದಾಯ ಮೂಲವನ್ನು ಕಂಡುಹಿಡಿದು ಸಂಗ್ರಹಿಸಲು ಪ್ರಯತ್ನಿಸಿದರೂ ಕೂಡ ಅನೇಕ ಅಡೆತಡೆಗಳು ಇರುವುದರಿಂದ ಸರ್ಕಾರಕ್ಕೆ ಈ ತೆರಿಗೆ ಸಂಗ್ರಹ ಮಾಡಲು ಸಾಧ್ಯವಾಗುತ್ತಿಲ್ಲ.
ತೆರಿಗೆ ಸಂಗ್ರಹದಲ್ಲಿನ ಸಮಸ್ಯೆಯಿಂದಾಗಿ ಬಹುತೇಕ ಮೊಬೈಲ್ ಟವರ್ ಗಳು, ವಿಂಡ್ ಮಿಲ್ಸ್, ಖಾಸಗಿ ವಿದ್ಯುತ್ ಘಟಕಗಳು ಸರ್ಕಾರಕ್ಕೆ ತೆರಿಗೆ ಪಾವತಿಸಿಲ್ಲ. ಬಾಕಿ ಇರುವ ತೆರಿಗೆಯನ್ನು ಪಾವತಿಸುವಂತೆ ಸ್ಥಳೀಯ ಸಂಸ್ಥೆಗಳನ್ನು ಉತ್ತೇಜಿಸುವ ಬದಲು ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ಸಾಧನೆ ಅನುದಾನವನ್ನು ನೀಡುವಲ್ಲಿ ಆಸಕ್ತಿ ತಳೆದಿದೆ.

ಆದರೂ ಕೂಡ ಸ್ಥಳೀಯ ಸಂಸ್ಥೆಗಳ ಜೊತೆ ಖಾಸಗಿ ಕಂಪೆನಿಗಳ ಲಾಬಿಯಿಂದಾಗಿ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಕಂಡುಬರುವ ಲಕ್ಷಣ ಕಾಣುತ್ತಿಲ್ಲ. ದಾಖಲೆಗಳ ಪ್ರಕಾರ, ಕರ್ನಾಟಕದಲ್ಲಿರುವ 10,671 ಮೊಬೈಲ್ ಟವರ್ ಗಳಿಂದ ಕೇವಲ 3,159 ಕೋಟಿ ರೂಪಾಯಿ ಅಂದರೆ ಶೇಕಡಾ 29.6ರಷ್ಟು ಮಾತ್ರ ತೆರಿಗೆ ಸಂಗ್ರಹ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಉದಾಹರಣೆಗೆ ಮೊಬೈಲ್ ಟವರ್ ಗಳಿಂದ ಇದುವರೆಗೆ ತೆರಿಗೆ ಸಂಗ್ರಹವಾಗಿಲ್ಲ. ಇಲ್ಲಿರುವ 348 ಮೊಬೈಲ್ ಟವರ್ ಗಳಿಗೆ ಸ್ಥಳೀಯ ಸಂಸ್ಥೆಗಳು ತೆರಿಗೆ ವಿಧಿಸಿಯೇ ಇಲ್ಲ.

ಇದೇ ರೀತಿಯ ಪರಿಸ್ಥಿತಿ ವಿಂಡ್ ಮಿಲ್ಸ್, ಖಾಸಗಿ ಶಾಲೆಗಳು, ಖಾಸಗಿ ವಿದ್ಯುತ್ ಘಟಕಗಳು ಮತ್ತು ಇತರ ಕೆಲವುದರಲ್ಲಿ ಕಂಡುಬರುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ ಶೇಕಡಾ 20ರಿಂದ 22ರಷ್ಟು ಅಂದರೆ 767.21 ಕೋಟಿ ರೂಪಾಯಿ ತೆರಿಗೆ ಸಂಗ್ರಹ ಮಾಡಿದೆಯಷ್ಟೆ. ಒಟ್ಟು 3,566.88 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಬೇಕಿತ್ತು.

ಈ ಬಗ್ಗೆ ಸ್ಥಳೀಯ ಸಂಸ್ಥೆಯಿಂದ ಚುನಾಯಿತರಾಗಿ ಬಂದಿರುವ ವಿಧಾನ ಪರಿಷತ್ ನಾಯಕ ಕೋಟ ಶ್ರೀನಿವಾಸ ಪೂಜಾರಿ, ತೆರಿಗೆ ಸಂಗ್ರಹದಲ್ಲಿ ಪ್ರದೇಶವಾರು ವೈವಿಧ್ಯತೆಯಿದೆ. ದಕ್ಷಿಣ ಕನ್ನಡದಂತಹ ಜಿಲ್ಲೆಯಲ್ಲಿ ಶೇಕಡಾ 70ರಷ್ಟು ಸ್ಥಳೀಯ ಸಂಸ್ಥೆಗಳಿಂದ ತೆರಿಗೆ ಸಂಗ್ರಹವಾದರೆ ಕಲಬುರಗಿಯಂಥ ಜಿಲ್ಲೆಯಲ್ಲಿ ಶೇಕಡಾ0.27ರಷ್ಟು ತೆರಿಗೆ ಸಂಗ್ರಹವಾಗಿದೆ. 6 ಸಾವಿರ ಕೋಟಿ ರೂಪಾಯಿಗಿಂತ ಅಧಿಕ ತೆರಿಗೆ ಸಂಗ್ರಹವಾಗಬೇಕಿದೆ ಎಂದು ಸರ್ಕಾರ ಅಂದಾಜಿಸಿದರೂ ಕೂಡ ಎಲ್ಲಾ ಆಸ್ತಿಪಾಸ್ತಿಗಳನ್ನು ಲೆಕ್ಕಹಾಕಿದರೆ ಅದರ ದುಪ್ಪಟ್ಟು ಸರ್ಕಾರಕ್ಕೆ ಬರಲು ಬಾಕಿಯಿರಬಹುದು ಎಂದು ಹೇಳಿದರು.

SCROLL FOR NEXT